ಮೈಸೂರು: ಬಿಹಾರದಿಂದ ಇಲ್ಲಿ ಬಂದು ವಿವಿಧ ಕೆಲಸ ಕಾರ್ಯದಲ್ಲಿ ತೊಡಗಿದ್ದ 1,164 ವಲಸೆ ಕಾರ್ಮಿಕರು ತಮ್ಮ ರಾಜ್ಯದ ಪೂರ್ಣಿಯಾಕ್ಕೆ ಶ್ರಮಿಕ್ ವಿಶೇಷ ರೈಲಿನಲ್ಲಿ ಭಾನುವಾರ ಪ್ರಯಾಣ ಬೆಳೆಸಿದರು. ಒಬ್ಬರಿಗೆ ₹ 905 ಟಿಕೆಟ್ ದರವಿದ್ದು, ಇಷ್ಟೂ ಮಂದಿಯ ಟಿಕೆಟ್ ಹಣವನ್ನು ರಾಜ್ಯ ಸರ್ಕಾರವೇ ಭರಿಸಿದೆ.
ಮೈಸೂರಿನಿಂದ 700 ಮಂದಿ ರೈಲನ್ನೇರಿದರು. ಕೊಡಗಿನಿಂದ 60, ಚಾಮರಾಜನಗರದಿಂದ 40 ಹಾಗೂ ಮಂಡ್ಯದಿಂದ 370 ಮಂದಿ ರೈಲಿನಲ್ಲಿ ತೆರಳಿದರು. ಈ ರೈಲು ಮೇ 26ರಂದು ಮಧ್ಯಾಹ್ನ 1.10ಕ್ಕೆ ಪೂರ್ಣಿಯಾ ತಲುಪಲಿದೆ.
ರೋಟರಿ ಕ್ಲಬ್ನಿಂದ ಆಹಾರ ಮತ್ತು ನೀರನ್ನು ವಿತರಿಸಲಾಯಿತು. ಪ್ರಯಾಣದ ಅವಧಿಯಲ್ಲಿ ಎಲ್ಲರಿಗೂ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ ವತಿಯಿಂದ ಆಹಾರ ಮತ್ತು ನೀರು ಒದಗಿಸಲಾಗುತ್ತದೆ. ಎಲ್ಲರನ್ನೂ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಇವರ ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು.
ರೈಲ್ವೆ ರಕ್ಷಣಾ ದಳದ 6 ಮಂದಿ ರೈಲಿನ ರಕ್ಷಣೆಯ ಹೊಣೆ ಹೊತ್ತಿದ್ದಾರೆ. ಇವರು ರೈಲಿನಲ್ಲಿಯೇ ಇದ್ದು, ಪ್ರಯಾಣಿಕರ ಸುರಕ್ಷತೆಯ ಕಡೆಗೆ ಗಮನ ಹರಿಸಲಿದ್ದಾರೆ.
ಪ್ರಯಾಣಿಕರು ‘ಮಾಸ್ಕ್’ ಧರಿಸುವುದನ್ನು ಕಡ್ಡಾಯ ಗೊಳಿಸಲಾಗಿತ್ತು. ಎಲ್ಲ ಬೋಗಿಗಳಲ್ಲೂ ನೀರು, ಸಾಬೂನು ಹಾಗೂ ಸ್ಯಾನಿ ಟೈಸರ್ ವ್ಯವಸ್ಥೆ ಮಾಡಲಾಗಿತ್ತು. ರೈಲಿನಲ್ಲಿ 18 ಬೋಗಿಗಳು ಸ್ಲೀಪರ್ದರ್ಜೆ ಹಾಗೂ 2 ಸಾಮಾನ್ಯ ದರ್ಜೆ ಬೋಗಿಗಳು ಇದ್ದವು.
ಕಳೆದ ವಾರ ಉತ್ತರಪ್ರದೇಶಕ್ಕೆ ಎರಡು ರೈಲಿನಲ್ಲಿ ವಲಸೆ ಕಾರ್ಮಿಕರು ಹೊರಟಿದ್ದರು. ಆದರೆ, ಇವರ ಪ್ರಯಾಣಭತ್ಯೆಯನ್ನು ಸರ್ಕಾರ ಭರಿಸಿರಲಿಲ್ಲ.