ಮೈಸೂರು: ಶಾಸಕ ತನ್ವೀರ್ಸೇಠ್ ಮೇಲೆ ಹಲ್ಲೆ ನಡೆಸುವುದಕ್ಕೆ ಮುನ್ನ ಫರ್ಹಾನ್ಪಾಷಾನಿಗೆ ವ್ಯವಸ್ಥಿತವಾದ ತರಬೇತಿ ನೀಡಲಾಗಿತ್ತು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ.
ದಾಳಿ ನಡೆಸಿದ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು ಯಾವುದೇ ತರಬೇತಿ ಇಲ್ಲದೇ ಹಾಗೂ ಪೂರ್ವಸಿದ್ಧತೆ ಇಲ್ಲದೇ ಇಂತಹ ದಾಳಿ ನಡೆಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಗಾಯಕ ಹಾಡುತ್ತಿರುವಾಗ ಮಧ್ಯದಲ್ಲಿ ಮತ್ತಾರೋ ಮಾತನಾಡಿಸುತ್ತಿರುವ ಸಂದರ್ಭದಲ್ಲಿ ಎಲ್ಲರ ಗಮನ ಅತ್ತ ಕಡೆ ಇರುವಾಗ ಹೊಂಚು ಹಾಕಿದ್ದ ಆರೋಪಿ ಹಲ್ಲೆ ನಡೆಸಿರುವುದು ಹಾಗೂ ದೇಹದ ಬೇರೆಲ್ಲ ಭಾಗಗಳನ್ನು ಬಿಟ್ಟು ಕುತ್ತಿಗೆಗೆ ಹೊಡೆದಿರುವುದು ಇದರ ಹಿಂದೆ ಸಾಕಷ್ಟು ಪೂರ್ವಸಿದ್ಧತೆ ಇತ್ತು ಎಂಬುದಕ್ಕೆ ಪುಷ್ಠಿ ನೀಡಿದೆ.
ಆರೋಪಿ ಫರ್ಹಾನ್ನ ಮೊಬೈಲ್ ಕರೆಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಪದೇ ಪದೇ ಫೋನ್ ಮಾಡಿದ, ಹೆಚ್ಚು ಹೊತ್ತು ಮಾತನಾಡಿರುವ ಸಂಖ್ಯೆಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿದ್ದಾರೆ.
ಕೇರಳದಲ್ಲಿ ಈಚೆಗೆ ನಡೆದಿರುವ ಕೊಲೆ ಪ್ರಕರಣಗಳ ಸಂಪೂರ್ಣ ವಿವರಗಳು ಇಲ್ಲಿನ ಪೊಲೀಸರ ಕೈ ಸೇರಿದೆ. ತ್ರಿಶೂರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಕೊಲೆ ಹಾಗೂ ಹಲ್ಲೆ ಪ್ರಕರಣಗಳ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸಿಪಿ ಮುತ್ತುರಾಜ್ ನೇತೃತ್ವದ ವಿಶೇಷ ತನಿಖಾ ತಂಡವು ಹಗಲಿರುಳೆನ್ನದೇ ತನಿಖೆಯಲ್ಲಿ ತೊಡಗಿದೆ. ಎಲ್ಲ ಬಗೆಯ ಆಯಾಮದಿಂದಲೂ ಯೋಚಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ತನಿಖೆ ಮುಗಿಯುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.