ತಿ.ನರಸೀಪುರ: ತಾಲ್ಲೂಕಿನ ಕರೊಹಟ್ಟಿ ಗ್ರಾಮದ ಕೆ.ವಿ.ನಾಗೇಂದ್ರ ಮತ್ತು ಸ್ನೇಹಾ ದಂಪತಿಯು ಬೀಗರೂಟಕ್ಕೆ ಬಂದ ಜನರಿಗೆ ಗಿಡಗಳನ್ನು ನೀಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
ಕೆ.ವಿ.ನಾಗೇಂದ್ರ ಅವರು ಆಂತರಿಕ ಭದ್ರತಾ ವಿಭಾಗದ ಉಪನಿರೀಕ್ಷಕರಾಗಿದ್ದಾರೆ. ಅವರು ಮೇ 16ರಂದು ವಿವಾಹವಾಗಿದ್ದರು. ಗ್ರಾಮದಲ್ಲಿ ಸೋಮವಾರ ಬೀಗರ ಔತಣಕೂಟ ಏರ್ಪಡಿಸಿದ್ದರು. ಇಲ್ಲಿ 600 ತೇಗದ ಗಿಡಗಳನ್ನು ವಿತರಿಸಿದ ದಂಪತಿ, ಅವುಗಳನ್ನು ಬೆಳೆಸುವಂತೆ ಅತಿಥಿಗಳಿಗೆ ಮನವಿ ಮಾಡಿದರು.
‘ಮದುವೆ ವೇಳೆ ಗಿಡಗಳನ್ನು ವಿತರಿಸುವ ಆಸೆ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಬೀಗರೂಟಕ್ಕೆ ಬರುವವರಿಗೆ ವಿತರಿಸಿದ್ದೇವೆ. ಪರಿಸರ ಸಂರಕ್ಷಣೆ ಮಾಡದಿದ್ದರೆ ಮನುಕುಲದ ಉಳಿಗಾಲ ಇರುವುದಿಲ್ಲ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕಾದರೆ ಅರಣ್ಯವನ್ನು ಬೆಳೆಸಬೇಕು’ ಎಂದು ನಾಗೇಂದ್ರ ತಿಳಿಸಿದರು.