ಮೈಸೂರು: ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ನಗರದಲ್ಲಿ 50ಕ್ಕೂ ಹೆಚ್ಚು ಮರ, 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ನಗರಪಾಲಿಕೆ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಶುಕ್ರವಾರ ತೆರವು ಕಾರ್ಯಾಚರಣೆ ಭರದಿಂದ ಸಾಗಿತು.
ನಗರಪಾಲಿಕೆಯ ‘ಅಭಯ’ ತಂಡವನ್ನು ಬಳಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಚ್ಚುವರಿಯಾಗಿ ಹೊರಗಿನ ಕೆಲಸಗಾರರನ್ನೂ ಬಳಸಿಕೊಳ್ಳಲಾಗಿದೆ. ಹಲವು ಕಡೆಗಳಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸರಿಪಡಿಸುವುದನ್ನು ಆದ್ಯತೆಯಾಗಿ ಸ್ವೀಕರಿಸಲಾಗಿದೆ ಎಂದು ನಗರಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಸದಾಶಿವ ಕೆ.ಚೆಟ್ನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಮುಂಗಾರು ಮಳೆ ಆರಂಭಕ್ಕೆ ಮುನ್ನವೇ ಒಣಗಿದ ಕೊಂಬೆಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯದೆ. ಮುಂಜಾಗ್ರತಾ ಕ್ರಮವಾಗಿ ತೆರವುಗೊಳಿವುದು ಸೂಕ್ತವಾಗಿದೆ. ಅರಣ್ಯ ಇಲಾಖೆಯ ಅನುಮತಿಯನ್ನು ಇದಕ್ಕಾಗಿ ಪಡೆಯಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
‘ತೆರವು ಕಾರ್ಯಾಚರಣೆಗೆ ‘ಶಕ್ತಿಮಾನ್’ ಸಾಧನ ಬಳಸಲಾಗಿದೆ. ಜೆಸಿಬಿ ಸಾಧನ ಬಳಸಿ ವಿದ್ಯುತ್ ಕಂಬ ತೆರವುಗೊಳಿಸಲಾಗುತ್ತಿದೆ. ನಗರಪಾಲಿಕೆ ಬಳಿ ಮರ ಕತ್ತರಿಸುವುದಕ್ಕಾಗಿ ಎರಡು ವಾಹನಗಳಿವೆ. ಹೆಚ್ಚುವರಿಯಾಗಿ ಎರಡು ವಾಹನ ನೀಡುವಂತೆ ಆಯುಕ್ತರಾದ ಶಿಲ್ಪಾ ನಾಗ್ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಭರವಸೆ ನೀಡಿದರು.
ಗುರುವಾರ ಸುರಿದ ಮಳೆಗೆ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.