ಬೆಟ್ಟದಪುರ (ಮೈಸೂರು): ಇಲ್ಲಿಗೆ ಸಮೀಪದ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಿಕಲ್ಲು ಗ್ರಾಮದ ಬಾಲಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದ ಇಬ್ಬರು ಯುವಕರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹಸುವಿನಕಾವಲು ಗ್ರಾಮದ ದರ್ಶನ್ (20), ರಂಜು (22) ಮೃತಪಟ್ಟ ದುರ್ದೈವಿಗಳು.
ಇವರು ಸೋಮವಾರ ಬೆಳಿಗ್ಗೆ ಕೆರೆಯಲ್ಲಿ ಜಾನುವಾರುಗಳ ಮೈ ತೊಳೆಯಲು ಹೋಗಿದ್ದಾಗ ದರ್ಶನ್ ಮತ್ತು ರಂಜು ಕಾಲುಜಾರಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಜೊತೆಯಲ್ಲಿದ್ದ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕದಳ ಹಾಗೂ ಈಜುಗಾರರ ಸಹಾಯದಿಂದ ಮೃತದೇಹಗಳನ್ನು ಕೆರೆಯಿಂದ ಮೇಲೆ ತೆಗೆಯಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲರೂ ಕೆರೆಯ ಬಳಿ ಜಮಾಯಿಸಿದ್ದರು. ಮೃತದೇಹ ಹೊರಗೆ ತೆಗೆಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಶವಗಳನ್ನು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ.