ಬೆಟ್ಟದಪುರ: ಇಲ್ಲಿಗೆ ಸಮೀಪದ ಕಿತ್ತೂರು ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ಸೋಮವಾರ ಸಂಜೆ ಆಟವಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು ತಂಬಾಕು ಸಸಿಗೆ ನೀರು ಹಾಯಿಸಲು ತೆಗೆದಿರುವ ಗುಂಡಿಯೊಳಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಗ್ರಾಮದ ಗೋಪಾಲೇಗೌಡ ಮಗಳು ನಿಶಾ (10), ವೆಂಕಟೇಶ್ ಪುತ್ರಿ ಅಕ್ಷಿತಾ (10) ಮೃತಪಟ್ಟ ಮಕ್ಕಳು.
ಈ ಇಬ್ಬರು ಅಕ್ಕಪಕ್ಕದ ಮನೆಯವರು. ಗದ್ದೆ ಉಳುಮೆ ಮಾಡುವುದನ್ನು ನೋಡಲು ತೆರಳಿದ್ದರು. ಅಲ್ಲಿಯೇ ಆಟವಾಡುತ್ತಿದ್ದ ಇಬ್ಬರೂ; ತಂಬಾಕು ಸಸಿ ನಾಟಿಗಾಗಿ ತೆಗೆದಿದ್ದ ಸುಮಾರು ಹತ್ತು ಅಡಿ ಆಳದ ನೀರಿನ ಗುಂಡಿಗೆ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾರೆ.
ಸಂಜೆಯಾದರೂ ಮನೆಗೆ ಮಕ್ಕಳು ಮರಳದಿದ್ದಾಗ ಗಾಬರಿಗೊಂಡ ಪೋಷಕರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ರಾತ್ರಿ 8 ಗಂಟೆ ಸಮಯದಲ್ಲಿ ಜಮೀನಿನ ಬಳಿಗೆ ಹೋಗಿ ಗುಂಡಿ ಹತ್ತಿರ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ತಡರಾತ್ರಿಯಾದರು ದೂರು ದಾಖಲಾಗಿಲ್ಲ.