ಮೈಸೂರು: ಕಳೆದೊಂದು ವಾರದಿಂದ ತರಕಾರಿಗಳ ಬೆಲೆಗಳಲ್ಲಿ ಭಾರಿ ಏರಿಳಿತ ಕಂಡು ಬಂದಿದೆ. ಇದರಿಂದ ರೈತರು ಗೊಂದಲಕ್ಕೆ ಒಳಗಾಗಿದ್ದು, ಸರಿಯಾದ ಲಾಭ ಸಿಗದೇ ಪರಿತಪಿಸುತ್ತಿದ್ದಾರೆ.
ಒಂದೇ ದಿನಕ್ಕೆ ಕೆ.ಜಿಗೆ ₹ 5ರಿಂದ ₹ 10ರವರೆಗೆ ದರದಲ್ಲಿ ವ್ಯತ್ಯಾಸವಾಗುತ್ತಿದೆ. ಕೆಲವೊಮ್ಮೆ ಹೆಚ್ಚಾದರೆ, ಮತ್ತೆ ಕೆಲವೊಮ್ಮೆ ಇಳಿಕೆಯಾಗುತ್ತಿದೆ. ಇದು ರೈತರ ಗೊಂದಲಕ್ಕೆ ಕಾರಣವಾಗುತ್ತಿದೆ.
ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ ಧಾರಣೆ ಅ.27ರಂದು ಕೆ.ಜಿಗೆ ₹ 25 ಇತ್ತು. ಮರುದಿನವೇ ಇದರ ಧಾರಣೆ ₹ 20ಕ್ಕೆ ಕುಸಿತ ಕಂಡಿತು. ಮತ್ತೆ 30ರಂದು ₹ 30ಕ್ಕೆ ಏರಿಕೆ ಕಂಡಿತು. ಸೋಮವಾರ ₹ 23ಕ್ಕೆ ಕಡಿಮೆಯಾಗಿದೆ.
‘ಒಂದು ದಿನ ಇದ್ದ ಬೆಲೆ ಮರುದಿನ ಇರುತ್ತದೆ ಎಂಬ ನಂಬಿಕೆ ಇಲ್ಲ. ಮುಂಚೆ ಎಲ್ಲ ಗರಿಷ್ಠ ಎಂದರೆ ಕೆ.ಜಿಗೆ ಒಂದೆರಡು ರೂಪಾಯಿಗಳ ವ್ಯತ್ಯಾಸ ಇರುತ್ತಿತ್ತು. ಈಗ ₹ 5ರಿಂದ ₹ 10ರವರೆಗೆ ವ್ಯತ್ಯಾಸ ಉಂಟಾಗಿದೆ’ ಎಂದು ಶಿರಮಳ್ಳಿಯ ರೈತ ಕಾರ್ತೀಕ ಅಳಲು ತೋಡಿಕೊಂಡರು.
ಉಳಿದಂತೆ, ಕ್ಯಾರೆಟ್ ಬೆಲೆ ಕೆ.ಜಿಗೆ ₹ 75ರಿಂದ 60ಕ್ಕೆ, ದಪ್ಪಮೆಣಸಿನಕಾಯಿ ₹ 40ರಿಂದ ₹ 35ಕ್ಕೆ ಕಡಿಮೆಯಾಗಿದೆ. ಬೀನ್ಸ್ ಬೆಲೆ ₹ 20ರಿಂದ ₹ 25ಕ್ಕೆ ಏರಿಕೆಯಾಗಿದೆ. ಬದನೆ ಬೆಲೆ ಕೆ.ಜಿಗೆ ₹ 14ರಲ್ಲೇ ಸ್ಥಿರವಾಗಿದೆ.
ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಈ ವಾರ ಕೊಂಚ ಇಳಿಕೆಯಾಗಿದೆ. ಒಂದು ಮೊಟ್ಟೆಯ ಸಗಟು ಬೆಲೆ ₹ 5.27ರಿಂದ 5.10ಕ್ಕೆ ಕಡಿಮೆಯಾಗಿದೆ.
ಇಳಿಯದ ಈರುಳ್ಳಿ ಧಾರಣೆ
ಈರುಳ್ಳಿ ಧಾರಣೆ ಈ ವಾರವೂ ಕೆ.ಜಿಗೆ ₹ 100ರಲ್ಲೇ ಮುಂದುವರಿದಿದೆ. ಹಾಪ್ಕಾಮ್ಸ್ನಲ್ಲಿ ಕೆ.ಜಿಗೆ ₹ 100 ಇದ್ದರೆ, ಉಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಇದರ ಆಸುಪಾಸಿನಲ್ಲೇ ದರ ನಿಗದಿಯಾಗಿದೆ. ಎಪಿಎಂಸಿ ಸಗಟು ಮಾರುಕಟ್ಟೆಗೆ ಈ ವಾರವೂ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿಲ್ಲ.