ಮೈಸೂರು: ಕೋವಿಡ್–19 ವಿಚಾರವಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ರಚಿಸಿರುವ ಅಧಿಕಾರಿಗಳ ತಂಡವು ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಈ ವಿಚಾರವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ‘ಎಎಸ್ಐ, ಸೆಸ್ಕ್ ಮತ್ತು ನೋಡೆಲ್ ಅಧಿಕಾರಿ ಸೇರಿದಂತೆ ರಚಿಸಿರುವ ಮೂವರು ಅಧಿಕಾರಿಗಳ ತಂಡವು ಕೋವಿಡ್ ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳ ಚಲನಾವಲನದ ಬಗ್ಗೆ ನಿಗಾವಹಿಸಬೇಕು’ ಎಂದರು.
ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳು ಶೇ 50 ರಷ್ಟು ಹಾಸಿಗೆಗಳನ್ನು ಸರ್ಕಾರ ಸೂಚಿಸುವ ಸೋಂಕಿತರಿಗೆ ಮೀಸಲಿಟ್ಟಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ಹಾಸಿಗೆಗಳ ಕೊರತೆ ಉಂಟಾಗದಂತೆ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ದರವನ್ನು ಪಾಲಿಸುತ್ತಿವೆಯೇ ಎಂಬುದನ್ನು ಸೋಂಕಿತರ ಕುಟುಂಬಸ್ಥರಿಂದ ಮಾಹಿತಿ ಪಡೆಯಬೇಕು. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಪಡೆದರೆ ಅದನ್ನು ವಾಪಸ್ಸು ಕೊಡಿಸುವಂತೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವಿವಿಧ ಸ್ವರೂಪದ ಹಾಸಿಗೆ ಪಟ್ಟಿಯನ್ನು ಪ್ರತಿದಿನ ಆಸ್ಪತ್ರೆಯ ಮುಂಭಾಗ ಪ್ರಕಟಿಸಬೇಕು. ಕೋವಿಡ್-19 ತಗುಲಿ ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಎಸ್3 ಪೋರ್ಟಲ್ನಲ್ಲಿ ದಾಖಲಿಸುವುದನ್ನು ಗಮನಿಸಬೇಕು ಎಂದರು.
ಪ್ರತಿ ಖಾಸಗಿ ಆಸ್ಪತ್ರೆಯು ಕಡ್ಡಾಯವಾಗಿ ಐಸಿಎಂಆರ್ ಸೂಚಿಸುವ ಚಿಕಿತ್ಸಾ ಕ್ರಮವನ್ನು ಅನುಸರಿಸುತ್ತಿರುವ ಬಗ್ಗೆ ಮಾಹಿತಿ ಪಡೆಯಬೇಕು. ಸೋಂಕಿತರು ಯಾವ ಕಾರಣಕ್ಕೆ ಮೃತಪಟ್ಟರು ಎಂಬುದರ ಬಗ್ಗೆ ಡೆತ್ ಆಡಿಟ್ ಮಾಡುವುದನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್, ನೋಡೆಲ್ ಅಧಿಕಾರಿಗಳಾದ ಡಾ.ರವಿ, ಡಾ.ಸೀತಾಲಕ್ಷ್ಮಿ, ಡಾ.ಜಗದೀಶ್, ರೂಪಶ್ರೀ, ಸೆಸ್ಕ್ ಎಂಜಿನಿಯರ್ ಹಾಗೂ ಪೊಲೀಸ್ ಸಹಾಯಕ ವೃತ್ತ ನೀರೀಕ್ಷಕರು ಇದ್ದರು.