ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಗು ಎತ್ತಿಕೊಂಡು ರಾತ್ರಿ ನಡಿಗೆ

ಬೇಲೂರು ಬಳಿ ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ತಮಿಳುನಾಡು ಕಾರ್ಮಿಕರು
Last Updated 7 ಮೇ 2020, 10:16 IST
ಅಕ್ಷರ ಗಾತ್ರ

ಮೈಸೂರು: ‌ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾದ ಕಾರ್ಮಿಕರು, ಹೇಗಾದರೂ ತಮಿಳುನಾಡು ತಲುಪಬೇಕು ಎಂಬ ಮಹಾದಾಸೆಯೊಂದಿಗೆ ಮಗು ಎತ್ತಿಕೊಂಡು ರಾತ್ರಿ ವೇಳೆ ನೂರಾರು ಕಿ.ಮೀ ನಡೆದು ಮೈಸೂರಿಗೆ ಬಂದಿದ್ದಾರೆ.

ಬೇಲೂರು ಬಳಿಯ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಹಿಳೆಯರೂ ಸೇರಿದಂತೆ 13 ಮಂದಿ ಆಟೊದಲ್ಲಿ ಹಾಸನಕ್ಕೆ ಬಂದಿದ್ದಾರೆ. ಅಲ್ಲಿಂದ ವಾಹನ ಸಿಗದ ಕಾರಣ 120 ಕಿ.ಮೀ ನಡೆದು ಬಂದಿದ್ದಾರೆ. ಮೈಸೂರಿಗೆ ಬಂದಾಗ ಅವರನ್ನು ತಡೆದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಬಳಿ ಕರೆತಂದಿದ್ದಾರೆ.

‘ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಬಂದಿದ್ದೆವು. ಊರಿನಲ್ಲಿ ಅಮ್ಮ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ನಮಗೂ ಇಲ್ಲಿ ತುಂಬಾ ಕಷ್ಟವಾಗಿದೆ. ದುಡಿದ ಹಣವೆಲ್ಲಾ ಖರ್ಚಾಗಿದೆ. ಹೇಗಾದರೂ ಮಾಡಿ ತಮಿಳುನಾಡು ತಲುಬೇಕಿದೆ’ ಎಂದು ನಾಮಕ್ಕಲ್‌ ಜಿಲ್ಲೆಯ ಚಿಣ್ಣಸ್ವಾಮಿ ‘ಪ್ರಜಾವಾಣಿ’ಗೆ ಜೊತೆ ಸಮಸ್ಯೆ ಹೇಳಿಕೊಂಡರು.

ಸುಧಾ ದಂಪತಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ವೃದ್ಧರೂ ಈ ಗುಂಪಿನಲ್ಲಿದ್ದಾರೆ. ಜೊತೆಗೆ ಬಟ್ಟೆ, ಪಾತ್ರೆ ಸೇರಿದಂತೆ ಏಳೆಂಟು ಗಂಟುಮೂಟೆಗಳಿವೆ. ಅನುಮತಿ ನೀಡಿದರೆ ತಮ್ಮೂರಿಗೆ ನಡೆದುಕೊಂಡೇ ಹೋಗಲು ಅವರು ಸಿದ್ಧರಿದ್ದಾರೆ.

‘ನಾವು ಹೇಗೊ ನಡೆಯುತ್ತೇವೆ. ಜೊತೆಯಲ್ಲಿ ಮಗುವಿದ್ದ ಕಾರಣ ತುಂಬಾ ಭಯವಾಯಿತು. ನಿದ್ದೆ ಮಾಡುತ್ತಿದ್ದ ಮಗು, ಎಚ್ಚರವಾದಾಗ ಅಳುತಿತ್ತು. ಕೆಲಸವಿಲ್ಲದ ದಿನಗಳನ್ನು ಕಂಡಿದ್ದೇವೆ. ಆದರೆ, ಇಷ್ಟೊಂದು ಕಷ್ಟ ಯಾವತ್ತೂ ಬಂದಿರಲಿಲ್ಲ’ ಎಂದು ಸುಧಾ ಭಾವುಕರಾದರು.

ವಾಸ್ತವ್ಯ ವ್ಯವಸ್ಥೆ: ‘13 ಕಾರ್ಮಿಕರನ್ನು ಹೊಯ್ಸಳ ಕರ್ನಾಟಕ ಸಂಘದಲ್ಲಿ ಇರಿಸಿದ್ದೇವೆ. ಆರೋಗ್ಯ ತಪಾಸಣೆ ನಡೆಸಲಾಗಿದೆ. ಅವರಿಗೆ ಇಲ್ಲಿಯೇ ವಾಸ್ತವ್ಯ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು. ತಮಿಳುನಾಡಿಗೆ ತೆರಳಲು ಪಾಸ್‌ ವ್ಯವಸ್ಥೆ ಆಗುವವರೆಗೇ ಇಲ್ಲಿಯೇ ಇರಿಸಿಕೊಳ್ಳಲಾಗುವುದು’ ಎಂದು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ತಮ್ಮಣ್ಣ ಹೇಳಿದರು.

ಬೆಳಿಗ್ಗೆ 10 ಗಂಟೆಗೆ ಬಂದು ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಮಗು ಮಲಗಿಸಿಕೊಂಡು ಕುಳಿತಿದ್ದ ಇವರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಆಹಾರ ಪೊಟ್ಟಣ, ನೀರು ಜೊತೆಗೆ ₹ 10 ಸಾವಿರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT