ಮೈಸೂರು: ‘ರಾಜಕೀಯದ ಬಗ್ಗೆ ನನಗೇನೂ ಗೊತ್ತಿಲ್ಲ. ಯಾವುದೇ ಅಭ್ಯರ್ಥಿಯ ಪರ ಪ್ರಚಾರಕ್ಕೂ ಹೋಗುವುದಿಲ್ಲ’ ಎಂದು ನಟ ಶಿವರಾಜ್ಕುಮಾರ್ ಹೇಳಿದರು.
ಏ. 5 ರಂದು ಬಿಡುಗಡೆಯಾಗಲಿರುವ ತಮ್ಮ ಹೊಸ ಸಿನಿಮಾ ‘ಕವಚ’ ಪ್ರಚಾರಾರ್ಥ ಭಾನುವಾರ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಕಳೆದ ಚುನಾವಣೆಯಲ್ಲಿ ಪತ್ನಿ ಗೀತಾ ಸ್ಪರ್ಧಿಸಿದ್ದರಿಂದ ಶಿವಮೊಗ್ಗಕ್ಕೆ ಪ್ರಚಾರಕ್ಕೆ ಹೋಗಿದ್ದೆ. ಈ ಬಾರಿ ಶಿವಮೊಗ್ಗಕ್ಕೂ ಹೋಗುವುದಿಲ್ಲ. ನಾನು ಪ್ರಚಾರಕ್ಕೆ ಬರಬೇಕೆಂದು ಮಧು ಬಂಗಾರಪ್ಪ ಕೂಡ ಬಯಸುವುದಿಲ್ಲ’ ಎಂದು ತಿಳಿಸಿದರು.
ಸುಮಲತಾ ಕರೆದರೆ ಮಂಡ್ಯದಲ್ಲಿ ಪ್ರಚಾರ ಮಾಡುವಿರಾ ಎಂಬ ಪ್ರಶ್ನೆಗೆ, ‘ಅವರು ಕರೆದಿಲ್ಲ. ಕರೆದರೂ ಹೋಗುವುದಿಲ್ಲ. ರಾಜಕೀಯದ ಕಲೆ ತಿಳಿಯುವಷ್ಟು ಬುದ್ಧಿವಂತನಲ್ಲ. ಸಿನಿಮಾದಲ್ಲೇ ಬ್ಯುಸಿಯಾಗಿದ್ದೇನೆ. ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಮಯವೂ ಇಲ್ಲ’ ಎಂದರು.