ಮೈಸೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಾದ ಭಾನುವಾರ ನಗರದಲ್ಲಿ ಸ್ತ್ರೀಶಕ್ತಿ ಮೇಳೈಸಿತ್ತು. ಹಲವು ಸಾಧಕಿಯರನ್ನು ಸನ್ಮಾನಿಸಲಾಯಿತು. ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ನಡೆದವು.
ಕಾವೇರಿ ಸಮೂಹ ಸಂಸ್ಥೆಗಳು ಹಾಗೂ ಕಾವೇರಿ ಹೃದ್ರೋಗ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಚಾಮುಂಡಿಬೆಟ್ಟ ಹತ್ತುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ಭಾಗಿಯಾದರು. 250ಕ್ಕೂ ಅಧಿಕ ಮಹಿಳೆಯರು ಲಘುಬಗನೆ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಏರಿ ಸಂಭ್ರಮಿಸಿದರು.
ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಲಾಯಿತು. ಸ್ತನ ಕ್ಯಾನ್ಸರ್, ಮಾನಸಿಕ ಖಿನ್ನತೆ, ಋತುಬಂಧ, ಗರ್ಭಾಶಯದ ಕ್ಯಾನ್ಸರ್ ಸೇರಿದಂತೆ ಅನೇಕ ಸ್ತ್ರೀ ರೋಗಗಳನ್ನು ಕುರಿತು ಅರಿವು ಮೂಡಿಸಲಾಯಿತು.
ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಚಂದ್ರಶೇಖರ್, ತುರ್ತು ವೈದ್ಯಕೀಯ ವಿಭಾಗದ ನಿರ್ದೇಶಕ ಡಾ.ವೈದ್ಯನಾಥನ್ ಹಾಗೂ ಇತರರು ಇದ್ದರು.
ಸೇಂಟ್ ಫಿಲಿಮಿನಾ ಕಾಲೇಜಿನ ವತಿಯಿಂದ ನಡೆದ ವಾಕಥಾನ್ಗೆ ಬಿಷಪ್ ಡಾ.ಕೆ.ಎ.ವಿಲಿಯಂ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂದೆ ಹಸಿರು ನಿಶಾನೆ ತೋರಿದರು. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಎಸ್.ದಿವ್ಯಾಶ್ರೀ ಅವರು ಶುಭ ಹಾರೈಸಿದರು.
‘ಗೆಳತಿ’ ಸಂಸ್ಥೆ ವತಿಯಿಂದ ಬೋಗಾದಿಯ 2ನೇ ಹಂತದ ಸಿದ್ಧಲಿಂಗೇಶ್ವರ ನಗರದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕನಕ ಹೇಮರೆಡ್ಡಿ ಸೇರಿದಂತೆ ಹಲವರು ಇಲ್ಲಿನ ದೇಗುಲದ ಮುಂದೆ ಹಾಗೂ ಆಸುಪಾಸಿನಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಇಲ್ಲಿನ ಸಿದ್ಧಪ್ಪಚೌಕದಲ್ಲಿರುವ ತುಳಸಿ ಕ್ಲಿನಿಕ್ನಲ್ಲಿ ಮಹಿಳೆಯರಿಗಾಗಿ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ ನಡೆಯಿತು.