ಹಂಪಾಪುರ: ಕೊರೊನಾ ಸೋಂಕಿತರ ಸಂಖ್ಯೆ ಗ್ರಾಮೀಣ ಭಾಗಗಳಲ್ಲೂ ಹೆಚ್ಚುತ್ತಿರುವುದರಿಂದಹೋಬಳಿಯ ಕೆಲ ಗ್ರಾಮಗಳಲ್ಲಿ ಮುಖಂಡರು ಹೊರಗಿನವರನ್ನು ನಿಯಂತ್ರಿಸಲು ಉಪಾಯ ಕಂಡುಕೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ದೊಡ್ಡದೊಡ್ಡ ನಗರಗಳಿಗೆ ಉದ್ಯೋಗಕ್ಕಾಗಿ ಹೋಗಿರುವ ಹಳ್ಳಿಗರು ಮರಳಿ ಊರುಗಳಿಗೆ ಬರಬೇಕೆಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಬರಬೇಕು. ಆಗ ಮಾತ್ರ ಗ್ರಾಮಕ್ಕೆ ಪ್ರವೇಶ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಬರುವವರಿಗೆ ಕೆಲ ಹಳ್ಳಿಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.
ಹಂಪಾಪುರ ಸಮೀಪದ ಕೋಳಗಾಲ ಹೊಸಬಡಾವಣೆಯಲ್ಲಿ ಮುಖಂಡರೆಲ್ಲಾ ತೀರ್ಮಾನ ಕೈಗೊಂಡು ಹೊರವಲಯದಲ್ಲಿ ನಾಮಫಲಕವನ್ನು ಅಳವಡಿಸಿದ್ದಾರೆ.
ನಾಮಫಲಕದಲ್ಲಿ ‘ಸಂಘ, ಸಂಸ್ಥೆ, ಬ್ಯಾಂಕ್ನವರು, ತರಕಾರಿ, ಬಟ್ಟೆ ವ್ಯಾಪಾರಿಗಳು, ಮಾಂಸ, ಮೀನು ಮಾರಾಟಗಾರರು ಯಾವುದೇ ಕಾರಣಕ್ಕೂ ಪ್ರವೇಶಿಸುವಂತಿಲ್ಲ, ಬೇರೆ ಗ್ರಾಮದ ಜನರು, ದಲ್ಲಾಳಿಗಳು ಸಹ ಬರುವಂತಿಲ್ಲ. ನಿಯಮ ಮೀರಿದರೆ ₹25,000 ದಂಡ ವಿಧಿಸಲಾಗುವುದು’ ಎಂಬ ಬರಹಒಳಗೊಂಡಿದೆ.
‘ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮ ಹಾಕಿಕೊಂಡಿದ್ದೇವೆ. ಜನರ ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ. ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಈ ನಿಯಮ ಪಾಲಿಸಬೇಕು’ ಎಂದು ಕೋಳಗಾಲ ಹೊಸಬಡಾವಣೆಯ ನಿವಾಸಿ ಮಹದೇವ ತಿಳಿಸಿದರು.
ಎಚ್.ಡಿ.ಕೋಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಲಾಗಿದ್ದು, ತರಕಾರಿ, ಬಟ್ಟೆ ವ್ಯಾಪಾರಿಗಳು ಗ್ರಾಮಗಳಿಗೆ ಹೋಗಲಾರದೆ ಪರದಾಡುವಂತಾಗಿದೆ.