ಮೈಸೂರು: ‘ಬೆಂಗಳೂರಿನ ನಂತರ ಸಾಫ್ಟ್ವೇರ್ ರಫ್ತಿನಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದ್ದು, 2026ರ ವೇಳೆಗೆ ರಫ್ತು ಪ್ರಮಾಣವನ್ನು ₹ 5 ಸಾವಿರ ಕೋಟಿಯಿಂದ ₹ 10 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದುಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ಗುಪ್ತಾ ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿಯಲ್ಲಿ ನಗರದ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಅ.19 ಹಾಗೂ 20ರಂದು ಆಯೋಜಿಸಿರುವ ‘ದಿ ಬಿಗ್ ಟೆಕ್ ಷೋ’ ಕುರಿತು ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನಗರದಲ್ಲಿನ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಲ್ಲಿ ಸುಮಾರು 80 ಸಾವಿರ ತಂತ್ರಜ್ಞರು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರದ ನೂತನ ಕ್ರಮಗಳಿಂದ ಬರುವ ನಾಲ್ಕು ವರ್ಷಗಳಲ್ಲಿ ಇವರ ಪ್ರಮಾಣ ದ್ವಿಗುಣಗೊಳ್ಳಲಿದೆ’ ಎಂದು ಪ್ರತಿಪಾದಿಸಿದರು.
‘ಡಿಜಿಟಲ್ ಆರ್ಥಿಕತೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷದ ಬಿಗ್ಟೆಕ್ ಷೋ ಫಲಪ್ರದವಾಗಿದ್ದು, ಹಲವು ಉದ್ಯಮಗಳು ಮೈಸೂರಿನಲ್ಲಿ ಹೂಡಿಕೆ ಮಾಡಲು ಮುಂದಾಗಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲದೆ, ನವೋದ್ಯಮ ಸ್ಥಾಪನೆಗೊಳ್ಳಲು ಅಗತ್ಯ ಸೌಕರ್ಯ ಒದಗಿಸುವ ವೇದಿಕೆ ಕಲ್ಪಿಸಲಾಗುತ್ತಿದೆ. ಹೂಡಿಕೆದಾರರು– ನವೋದ್ಯಮಿಗಳ ಸಂವಹನಕ್ಕೆ ಅಭಿಯಾನವು ಪೂರಕವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘ಬಿಯಾಂಡ್ ಬೆಂಗಳೂರು ಅಭಿಯಾನದಿಂದ ಪ್ರಯೋಜನ ಪಡೆದಿರುವ ನವೋದ್ಯಮಿಗಳಲ್ಲಿ ಶೇ 30 ರಷ್ಟು ಮಹಿಳೆಯರಾಗಿದ್ದಾರೆ. 1,200 ಮಹಿಳಾ ಉದ್ಯಮಿಗಳು ಹೊರಹೊಮ್ಮಿದ್ದಾರೆ’ ಎಂದರು.
ಎಕೋಸಾಫ್ಟ್ ಟೆಕ್ನಾಲಜಿ ಸಿಇಒ ಸುಧನ್ವಾ ಧನಂಜಯ ಮಾತನಾಡಿ, ‘ಐ.ಟಿ, ಎಲೆಕ್ಟ್ರಾನಿಕ್ಸ್ ಉದ್ಯಮಿಗಳು ಬೆಂಗಳೂರು, ಪುಣೆಯಲ್ಲೇಉದ್ಯಮ ಸ್ಥಾಪನೆಗೆ ಒಲವು ತೋರುತ್ತಿದ್ದರು. ಇದೀಗ ತಂತ್ರಜ್ಞಾನ ಉದ್ಯಮಗಳ ಸ್ಥಾಪನೆಗೆಮೈಸೂರು ಪ್ರಶಸ್ತ ಸ್ಥಳವಾಗಿದೆ. ಲಹರಿ, ಫ್ಯಾಬ್, ಸೆಮಿಕಂಡಕ್ಟರ್ ಸ್ಥಾಪನೆಯಾಗುತ್ತಿದ್ದು, ಉದ್ಯೋಗ ಸೃಷ್ಟಿಯ ನಗರವಾಗಲಿದೆ’ ಎಂದರು.
‘ಕಿರು ಬಂಡವಾಳದಲ್ಲಿ ಮತ್ತೆ ಉದ್ಯಮಗಳನ್ನು ಸ್ಥಾಪಿಸಲು ಮೈಸೂರಿಗರು ಮುಂದಾಗುತ್ತಿದ್ದು, ಹೂಡಿಕೆದಾರರು ಹೆಚ್ಚಿನ ಆಸಕ್ತಿ ವಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.
ಉದ್ಯಮಿ ಮಹೇಶ್ ರಾವ್ ಮಾತನಾಡಿ, ‘ಎಲೆಕ್ಟ್ರಾನಿಕ್ಸ್ ವಿನ್ಯಾಸ ಮಾಡುವ ಉದ್ಯಮಗಳು ಮೈಸೂರಿನಿಂದ ರಫ್ತು ಮಾಡುತ್ತಿದ್ದವು. ವಿನ್ಯಾಸ್, ಕೇನ್ಸ್, ರಾಮ್ಸನ್ಸ್ ರಫ್ತು ಸಾವಿರ ಕೋಟಿ ದಾಟುತ್ತದೆ. ವಿದೇಶದಲ್ಲಿನ ಭಾರತೀಯ ಪ್ರತಿಭೆಗಳು ಮಧ್ಯಮ ಪ್ರಮಾಣದ ಉದ್ಯಮಗಳ ಸ್ಥಾಪಿಸಲು ವಾಪಸಾಗುತ್ತಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು.
ಮಾಹಿತಿ ಹಂಚಿಕೆ ಹಾಗೂ ವಿಶ್ಲೇಷಣಾ ಕೇಂದ್ರದ (ಐಎಸ್ಎಸಿ) ಪ್ರಭಾರ ನಿರ್ದೇಶಕಆನಂದ ನಾಯ್ಡು, ಪ್ರೊಕ್ಸಿಲೆರಾ ಲಿಮಿಟೆಡ್ನ ರವಿಶಂಕರ್,ಕೆಡಿಇಎಂ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಸುಧೀರ್ ಇದ್ದರು.
ಎರಡು ದಿನ ‘ಬಿಗ್ ಟೆಕ್ ಷೋ’ನಲ್ಲಿ ಏನೇನಿದೆ?:
* ಅ.19ರ ಬೆಳಿಗ್ಗೆ 10ಕ್ಕೆ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಹೂಡಿಕೆದಾರರು ಹಾಗೂ ನವೋದ್ಯಮಿಗಳ ಸಮಾವೇಶ. 20 ನವೋದ್ಯಮಿಗಳು ಭಾಗಿ
* ಮಧ್ಯಾಹ್ನ 2ಕ್ಕೆ ಮಹಿಳಾ ಉದ್ಯಮಿಗಳೊಂದಿಗೆ ‘ವಿಮೆನ್ ಅಟ್ ವರ್ಕ್ ಕಾಂಕ್ಲೇವ್’ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ
* ವಿವಿಧ ಕಂಪನಿಗಳ ಸಿಇಒಗಳ ದುಂಡು ಮೇಜಿನ ಸಮಾವೇಶ:ಐ.ಟಿ. ಮತ್ತು ಬಿ.ಟಿ. ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೇಂದ್ರ ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಭಾಗಿ
* ಅ.20ರಂದು ಬೆಳಿಗ್ಗೆ 6ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ 5 ಕಿ.ಮೀ ವಾಕಥಾನ್ಗೆಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ. ಉದ್ಯಮಿಗಳು, ಹೂಡಿಕೆದಾರರು ಭಾಗಿ
* 9.30ಕ್ಕೆ ‘ಬಿಗ್ಟೆಕ್ ಷೋ’ ಉದ್ಘಾಟನೆ– ಕೇಂದ್ರ ಕೌಶಲಾಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್. ಐಬಿಎಂ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಐಇಎಸ್ಎ ಸಿಇಒ ಕೆ.ಕೃಷ್ಣಮೂರ್ತಿ, ಐ.ಟಿ ಮತ್ತು ಬಿ.ಟಿ ಇಲಾಖೆ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಸಂಸದ ಪ್ರತಾಪ ಸಿಂಹ ಭಾಗಿ
* 11.35ಕ್ಕೆ ‘ಮೈಸೂರು– ಜಾಗತಿಕ ತಂತ್ರಜ್ಞಾನ ಕೇಂದ್ರ’ ಕುರಿತು ಸಂವಾದ
* ಮಧ್ಯಾಹ್ನ 1.50ಕ್ಕೆ ‘ಮೈಸೂರು– ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮ್ಯಾನೇಜ್ಮೆಂಟ್ (ಇಎಸ್ಡಿಎಂ)’ ಸಂವಾದ
* 2.30ಕ್ಕೆ ಸೈಬರ್ ಲ್ಯಾನ್ಸರ್ಸ್– ಡಿಜಿಟಲ್ ಭದ್ರತೆ’
* 3.40ಕ್ಕೆ ‘ಸ್ಟಾರ್ಟ್ ಅಪ್ ಮೈಸೂರು’ ಸಂವಾದ
*4.10ಕ್ಕೆ ಸಮಾರೋಪ– ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.