ಮೈಸೂರು: ‘ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿ ಬರುವ ಮೃಗಾಲಯಗಳಿಗೆ 2022ರ ಏ.1ರಿಂದ ಡಿ.31ರವರೆಗೆ (9 ತಿಂಗಳಲ್ಲಿ) 52,77,013 ಸಂದರ್ಶಕರು ಭೇಟಿ ನೀಡಿದ್ದು, ಇದರಿಂದ ₹ 75.72 ಕೋಟಿ ಆದಾಯ ಸಂಗ್ರಹವಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.
‘ಕೋವಿಡ್ ನಂತರ ಮೃಗಾಲಯಗಳಿಗೆ ಜನರ ಭೇಟಿ ಜಾಸ್ತಿ ಆಗುತ್ತಿರುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಅತಿ ಹೆಚ್ಚು ಅಂದರೆ, 25.05 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಇದರಿಂದ ₹24.76 ಕೋಟಿ ಆದಾಯ ಬಂದಿದೆ. ಬನ್ನೇರುಘಟ್ಟವನ್ನು 16.12 ಲಕ್ಷ ಮಂದಿ ಸಂದರ್ಶಿಸಿದ್ದು, ಇದರಿಂದ ₹ 42.68 ಕೋಟಿ ಆದಾಯ ಸಂಗ್ರಹವಾಗಿದೆ. ಸಂದರ್ಶಕರ ಭೇಟಿ ವಿಷಯದಲ್ಲಿ ಮೈಸೂರು ಮೃಗಾಲಯ ನಂ.1 ಸ್ಥಾನದಲ್ಲಿದ್ದರೆ, ವರಮಾನದಲ್ಲಿ ಬನ್ನೇರಘಟ್ಟ ಮೊದಲಿದೆ. ಮೈಸೂರು ಝೂಗೆ ಡಿಸೆಂಬರ್ ಒಂದರಲ್ಲೇ 5.24 ಲಕ್ಷ ಬಂದಿದ್ದರು. ಇದು ಇತ್ತೀಚಿನ ವರ್ಷಗಳಲ್ಲಿ ದಾಖಲೆಯಾಗಿದೆ’ ಎಂದು ತಿಳಿಸಿದರು.
ಆರ್ಥಿಕವಾಗಿ ಹೊರೆ:
‘ಕೋವಿಡ್–19 ಕಾರಣದಿಂದಾಗಿ ಮೃಗಾಲಯಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಲಾಗಿತ್ತು. ಬಳಿಕವೂ ಸಂದರ್ಶಕರ ಸಂಖ್ಯೆ ಕಡಿಮೆಯಾದ್ದರಿಂದಾಗಿ, ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯಗಳ ಆಂತರಿಕ ಸಂಪನ್ಮೂಲದಿಂದ ಇತರ ಮೃಗಾಲಯಗಳಿಗೆ (ಕಿರು) ಪ್ರಾಣಿಗಳ ಆಹಾರ–ಮೇವು, ಪಶುವೈದ್ಯಕೀಯ ವೆಚ್ಚ, ಸಿಬ್ಬಂದಿ–ನೌಕರರ ವೇತನ ಹಾಗೂ ನಿರ್ವಹಣೆ ವೆಚ್ಚವನ್ನು ಭರಿಸಲಾಗಿತ್ತು’ ಎಂದು ಹೇಳಿದರು.
‘ಇತ್ತೀಚಿನ ದಿನಗಳಲ್ಲಿ ಮಾನವ–ಪ್ರಾಣಿ ಸಂಘರ್ಷ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ರಕ್ಷಿಸಲಾಗುತ್ತಿದೆ. ಇದರಿಂದ ಪ್ರಾಧಿಕಾರದ ಮೇಲೆ ಆರ್ಥಿಕವಾಗಿ ಹೊರೆ ಉಂಟಾಗುತ್ತಿದೆ. ಮೃಸೂರು ಝೂ, ಬನ್ನೇರುಘಟ್ಟ ಜೈವಿಕ ಉದ್ಯಾನ, ಹುಲಿ–ಸಿಂಹ ಸಫಾರಿ, ಶಿವಮೊಗ್ಗ ಮತ್ತು ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಹಾಗೂ ಗದಗ ಮೃಗಾಲಯದಲ್ಲಿ ರಕ್ಷಿಸಲಾದ ಪ್ರಾಣಿಗಳ ನಿರ್ವಹಣೆ, ಪೋಷಣೆ, ಆಹಾರ–ಮೇವು, ಪಶುವೈದ್ಯಕೀಯ ವೆಚ್ಚ, ಪ್ರಾಣಿ ಪಾಲಕ ವೇತನಕ್ಕಾಗಿ ಪ್ರತಿ ವರ್ಷ ₹ 7ಕೋಟಿಯಿಂದ ₹ 8 ಕೋಟಿಯನ್ನು ಪ್ರಾಧಿಕಾರದ ಆಂತರಿಕ ಸಂಪನ್ಮೂಲದಿಂದ ಖರ್ಚು ಮಾಡುತ್ತಿದ್ದೇವೆ. ಹೀಗಾಗಿ, ರಕ್ಷಿಸಿದ ಪ್ರಾಣಿಗಳ ಪಾಲನೆ, ಪೋಷಣೆಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.
₹ 115.31 ಕೋಟಿ ಬಜೆಟ್ಗೆ ಅನುಮೋದನೆ:
‘2022–23ನೇ ಸಾಲಿನಲ್ಲಿ ₹ 115.31 ಕೋಟಿ ಬಜೆಟ್ಗೆ ಅನುಮೋದನೆ ನೀಡಲಾಗಿದೆ. ಈ ವರ್ಷದ ಮಾರ್ಚ್ವರೆಗೆ ಮೃಗಾಲಯಗಳ ನಿರ್ವಹಣೆ, ಅಭಿವೃದ್ಧಿ, ಆಡಳಿತಾತ್ಮಕ ವೆಚ್ಚ, ಪ್ರಾಣಿಗಳ ಆಹಾರ ಮೊದಲಾದವುಗಳಿಗಾಗಿ ₹30 ಕೋಟಿ ಬೇಕಾಗುತ್ತದೆ. ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.
‘ದೇಣಿಗೆ ಹಾಗೂ ದತ್ತು ಯೋಜನೆಯಡಿ 2022ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ 5,557 ಪ್ರಾಣಿ–ಪಕ್ಷಿಗಳನ್ನು ಸಾರ್ವಜನಿಕರು ದತ್ತು ಪಡೆದಿದ್ದು, ಇದರಿಂದ ₹ 1.61 ಕೋಟಿ ಸಂಗ್ರಹವಾಗಿದೆ. ಬೆಳಗಾವಿ ಸೇರಿದಂತೆ ಎಲ್ಲ ಮೃಗಾಲಯಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದರು.
ಎಂಟ್ರೆನ್ಸ್ ಪ್ಲಾಜಾ:
‘ವಿಜಯನಗರ ಜಿಲ್ಲೆಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ನೂತನವಾಗಿ ಎಂಟ್ರೆನ್ಸ್ ಪ್ಲಾಜಾ ನಿರ್ಮಿಸಲಾಗುತ್ತಿದೆ. ₹ 9.34 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, 1ನೇ ಹಂತದ ಕಾಮಗಾರಿಯು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.
ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ‘ಮೈಸೂರು ಝೂನಲ್ಲಿ ಮಾಸ್ಟರ್ ಪ್ಲಾನ್ನಂತೆ ಮಾಹಿತಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಮಾಸ್ಟರ್ ಪ್ಲಾನ್ನ ಪ್ರಾಣಿ ಸಂಗ್ರಹಣಾ ಮಿತಿಯನ್ನು ಅನುಸರಿಸುವ ಸಲುವಾಗಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರಿನ ಜಿಂಕೆಗಳನ್ನು ಅರಣ್ಯ ಇಲಾಖೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ನಿಯಮಾನುಸಾರ ಸ್ಥಳಾಂತರಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಚಣ್ಣ ಹಾಗೂ ಗೋಕುಲ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇದ್ದರು.
ಮೃಗಾಲಯಗಳ ವರಮಾನ ವಿವರ
ಹೆಸರು;ಸಂದರ್ಶಕರ ಸಂಖ್ಯೆ;ವರಮಾನ (₹ಗಳಲ್ಲಿ)
ಮೈಸೂರು;25,05,514;24,76,91,745
ಕಾರಂಜಿಕೆರೆ;2,57,218;1,45,68,300
ಬನ್ನೇರುಘಟ್ಟ;16,12,721;42,68,86,415
ಹಂಪಿ;1,24,100;1,70,75,220
ಚಿತ್ರದುರ್ಗ;1,17,761;34,17,370
ಗದಗ;1,24,696;67,62,532
ಕಲಬುರಗಿ;74,473;13,11,250
ಬೆಳಗಾವಿ;1,82,718;66,20,415
ದಾವಣಗೆರೆ;35,877;7,37,890
ಶಿವಮೊಗ್ಗ;2,41,935;3,22,54,445
ಒಟ್ಟು;52,77,013;75,72,85,582
(2022ರ ಏ.1ರಿಂದ ಡಿ.31ರವರೆಗೆ)
ಪ್ರಸ್ತಾವ ಸಲ್ಲಿಸಲಾಗಿದೆ
ಮೈಸೂರು ಮೃಗಾಲಯಕ್ಕೆ ಬರುವವರ ವಾಹನಗಳ ನಿಲುಗಡೆಗಾಗಿ ರೇಸ್ ಕೋರ್ಸ್ನ ಜಾಗ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
–ಎಂ.ಶಿವಕುಮಾರ್, ಅಧ್ಯಕ್ಷ, ಕರ್ನಾಟಕ ಮೃಗಾಲಯ ಪ್ರಾಧಿಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.