ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರ ವ್ಯಾಪ್ತಿಯ ಕೆಮ್ಮಣ್ಣುಗುಂಡಿ ಬಳಿ ಶುಕ್ರವಾರ ಬೆಳಿಗ್ಗೆ ಸಫಾರಿ ವೇಳೆ 12 ವರ್ಷದ ಕಪ್ಪು ಚಿರತೆ ಕಾಣಿಸಿಕೊಂಡಿದೆ.
ಬಿಸಲವಾಡಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಡಿ.ಬಿ. ಕುಪ್ಪೆ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ಆರು ತಿಂಗಳಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
‘ಚಿರತೆ ಸಫಾರಿ ವ್ಯಾಪ್ತಿಯಿಂದ ದೂರವಿದ್ದು, ನಾಗರಹೊಳೆ ವ್ಯಾಪ್ತಿಯಲ್ಲಿ ತನ್ನ ಗಡಿ ಗುರುತಿಸಿಕೊಂಡಿತ್ತು’ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಸ್.ಎಸ್. ಸಿದ್ದರಾಜು ತಿಳಿಸಿದರು.
‘ಹುಲಿಗಳು ಒಂದು ಗಡಿಯನ್ನು ಗುರುತಿಸಿಕೊಂಡ ಬಳಿಕ ಮತ್ತೊಂದು ಕಡೆಗೆ ಹೋಗುವುದಿಲ್ಲ. ಚಿರತೆಗಳು ತಮ್ಮ ಗಡಿ ಪ್ರದೇಶವನ್ನು ಆಗಾಗ್ಗೆ ಬದಲಿಸುತ್ತಿರುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ತಿಳಿಸಿದರು.