ಭಾನುವಾರ, 17 ಮೇ 2026
×
ADVERTISEMENT

ಪ್ರಜಾವಾಣಿ ಸಾಧಕಿಯರ ಸಂವಾದ: ಮುಂಜಾನೆ ಎಬ್ಬಿಸಿ ಓದಿಸಿದವಳು ತಾಯಿ; ಸಿದ್ದರಾಮಯ್ಯ

ಭಾಗ್ಯ ಎನ್ನುವುದು ಹೆಸರಲ್ಲ, ಪದವಷ್ಟೇ; ಸಿದ್ದರಾಮಯ್ಯ
Published : 29 ಮಾರ್ಚ್ 2026, 0:24 IST
Last Updated : 29 ಮಾರ್ಚ್ 2026, 0:24 IST
ADVERTISEMENT
ಫಾಲೋ ಮಾಡಿ
Comments
ಪ್ರ

ನಿಮ್ಮ ಜೀವನದಲ್ಲಿ ಪ್ರಭಾವ ಬೀರಿದ, ಸ್ಫೂರ್ತಿ ಕೊಟ್ಟ ಮಹಿಳೆ ಯಾರು?

ಅಂತಹವರಿಲ್ಲ (ನಗು). ಆದರೆ ನಾನು ವಿದ್ಯಾವಂತನಾಗಲು ರಾಜಪ್ಪ ಎಂಬ ಮೇಷ್ಟ್ರು ಕಾರಣ. ನಾನು ಐದನೇ ತರಗತಿಗೆ ನೇರವಾಗಿ ಸೇರಿದೆ. ವೀರಮಕ್ಕಳ ಕುಣಿತಕ್ಕೆ ಸೇರಿದ್ದ ನಮ್ಮನ್ನು ಅವರು ನೇರವಾಗಿ ಐದನೇ ತರಗತಿಗೆ ಸೇರಿಸಿಕೊಂಡರು. ನಾನು ಕಾನೂನು ಕಾಲೇಜು ಓದುವಾಗ ಪ್ರೊ. ನಂಜುಂಡಸ್ವಾಮಿ ಪ್ರಭಾವದಿಂದ ಮುಂದೆ ಸಮಾಜವಾದಿ ಪಕ್ಷ ಸೇರಿದೆ. ರಾಜಕೀಯ ಪ್ರವೇಶಕ್ಕೆ ಅವರೇ ನನಗೆ ಪ್ರೇರಣೆ.

ಪ್ರ

ನೀವು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಯಾವತ್ತಾದರೂ ಅಡುಗೆ ಮನೆಗೆ ಹೋಗಿ ಒಂದು ದಿನ ಅಡುಗೆ ಮಾಡಿದ್ದೀರ? ಕನಿಷ್ಠ ಕಾಫಿ, ಟೀ ಮಾಡಿದ್ದೀರ?

ಇಲ್ಲ. ಡಿನ್ನರ್ ಮಾಡಿದ್ದೀನಿ ಅಷ್ಟೇ (ನಗು). ನಾನು ಬಿ.ಎಸ್‌ಸಿ ಮೊದಲ ವರ್ಷದಲ್ಲಿ ಓದುತ್ತಿದ್ದಾಗ ನಾವೇ ಅನ್ನ ಮಾಡಿಕೊಂಡು, ಹೋಟೆಲ್‌ನಲ್ಲಿ ಸಾಂಬಾರ್ ತರುತ್ತಿದ್ದೆವು. ರಾಜಕೀಯಕ್ಕೆ ಬಂದ ಮೇಲೆ ಅಡುಗೆ ಮಾಡಿಲ್ಲ. ನನ್ನ ಮನೆಯಲ್ಲಿ ಮಡದಿ, ಮಕ್ಕಳು ಯಾವತ್ತೂ ಮನೆ ಕೆಲಸಕ್ಕೆ ನನ್ನನ್ನು ಕರೆಯುತ್ತಿರಲಿಲ್ಲ.

ಪ್ರ

ನೀವು ಯಾವಾಗಲೂ ತಂದೆ ಬಗ್ಗೆ ಹೇಳುತ್ತಿದ್ದೀರಿ. ಆದರೆ ತಾಯಿ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅವರ ಬಗ್ಗೆ ಹೇಳಿ.

ನಮ್ಮ ತಾಯಿ ಪಾಪ ಅವಿದ್ಯಾವಂತರು. ಆದರೆ ಅವರು ಬೆಳಿಗ್ಗೆ ನಾಲ್ಕು ಗಂಟೆಗೆ ರಾಗಿ ಬೀಸಲು ಎದ್ದು, ಓದಿಸಲಿಕ್ಕೆ ಬೆಳಿಗ್ಗೆ ನನ್ನನ್ನೂ ಏಳಿಸುತ್ತಿದ್ದರು. ಮುಖ ತೊಳೆಸಿ ಸೀಮೆಎಣ್ಣೆ ದೀಪ ಹಚ್ಚಿಟ್ಟು ಓದಲು ಕೂರಿಸುತ್ತಿದ್ದರು. ಅದಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ನಮ್ಮಪ್ಪ ಜಿಪುಣ. ಆದರೆ ನನ್ನ ತಾಯಿ ಸ್ವಲ್ಪ ದುಡ್ಡು ಕೊಡುತ್ತಿದ್ದರು.

ಪ್ರ

ನೀವು ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಬಂದು ಓದಿದ್ದೀರಿ. ಇಡೀ ಜೀವನದಲ್ಲಿ ನೀವು ಯಾರನ್ನಾದರೂ ಲವ್ ಮಾಡಿದ್ದೀರ?

ಮಾಡಿದ್ದೆ. ಅದನ್ನು ಹೇಳಬಾರದು (ನಗು)

ಪ್ರ

2013ರಲ್ಲಿ ನೀವು ಅಧಿಕಾರಕ್ಕೆ ಬಂದು ಅನ್ನ ಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಬೇರೆ ಬೇರೆ ಭಾಗ್ಯಗಳನ್ನು ಕೊಟ್ಟಿರಿ. ಆ ಭಾಗ್ಯ ಯಾರು ಸರ್‌?

ಭಾಗ್ಯ ಎನ್ನುವುದು ಮನುಷ್ಯ ಅಲ್ಲ, ಒಂದು ಪದ. ಅನೇಕ ಭಾಗ್ಯಗಳನ್ನು ನಾನು ಸಮಾಜದ ಬಡವರಿಗಾಗಿ ನೀಡಿದ್ದೇನೆ. ಅದರ ಮುಂದುವರಿದ ಭಾಗವೇ ಗ್ಯಾರಂಟಿ. ಶಕ್ತಿ ಯೋಜನೆಯಲ್ಲಿ 698 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಎಲ್ಲ ಧರ್ಮ, ಜಾತಿ, ಭಾಷಿಕರೂ ಇದ್ದಾರೆ.

ಪ್ರ

ಶಕ್ತಿ ಯೋಜನೆಯಲ್ಲಿ ಅತ್ತೆ–ಸೊಸೆ ಒಟ್ಟಿಗೆ ಹೋಗಬಹುದ ಸರ್?

(ನಗು). ಖಂಡಿತ ಹೋಗಬಹುದು. 1.26 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ನೀಡಿದ್ದೇವೆ. ಅತ್ತೆ–ಸೊಸೆ ಯಾರು ಮನೆಯ ಯಜಮಾನಿಯರೋ ಅವರಿಗೆ ಸಿಕ್ಕಿದೆ.

ಪ್ರ

ನಿಮ್ಮ ಗ್ಯಾರಂಟಿ ಯೋಜನೆಗಳೆಲ್ಲ ಹೆಚ್ಚು ಮಹಿಳೆಯರ ಪರವಾಗಿ ಇರುವುದರ ಹಿಂದಿನ ಉದ್ದೇಶವೇನು?

ಮಹಿಳೆಯರು ಸ್ವಾವಲಂಬಿಗಳಾಗಬೇಕು. ಲಿಂಗ ತಾರತಮ್ಯ ಹೋಗಬೇಕು. ಮಹಿಳೆಯರು ಸಮಾಜದಲ್ಲಿ ಕಟ್ಟೆಕಡೆಯ ವ್ಯಕ್ತಿಗಳು. ಅವರಿಗೆ ಆರ್ಥಿಕ– ಸಾಮಾಜಿಕವಾಗಿ ಶಕ್ತಿ ಬರದಿದ್ದರೆ ಲಿಂಗತಾರತಮ್ಯ ಹೋಗದು. ಒಂದು ಕಾಲದಲ್ಲಿ ಅವರು ಅಕ್ಷರ ಸಂಸ್ಕೃತಿಯಿಂದ ವಂಚಿತ ಆಗಿದ್ದರು. ಸಂವಿಧಾನವು ಅವರಿಗೆ ಶಿಕ್ಷಣದ ಅವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT