ಮೈಸೂರು: ಮುಗಿಯದ ಸಿದ್ಧತೆಗಳ ನಡುವೆಯೇ ನಗರದಲ್ಲಿ ಅದ್ಧೂರಿ ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ದೊರಕಿತು. ಅದ್ಧೂರಿಯ ಗುಂಗುಸಿದ್ಧತೆಯಕೊರತೆಯನ್ನುನುಂಗಿದ್ದರಿಂದ ಸಂಭ್ರಮಕ್ಕೆಮೇರೆಇರಲಿಲ್ಲ. ‘ತಡವಾದರೇನಂತೆ ನಷ್ಟವಿಲ್ಲ’ ಎಂಬ ಕವಿಸಾಲನ್ನು ಈ ಬಾರಿಯ ಉತ್ಸವದ ಮೊದಲ ದಿನ ಎಲ್ಲೆಡೆ ನೆನಪಿಸಿತ್ತು.
ಮಳಿಗೆಗಳ ಸಿದ್ಧತೆ ನಡುವೆಯೇ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳಕ್ಕೆ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಾಡ ಕುಸ್ತಿಗೆ ಚಾಲನೆ ದೊರಕಿತು. ನಟ ಶಿವರಾಜಕುಮಾರ್ ಗೈರುಹಾಜರಿ, ಯುವಜನರ ನೀರಸ ಪ್ರತಿಕ್ರಿಯೆಯ ನಡುವೆಯೇ ಕಲಾಮಂದಿರದಲ್ಲಿ ಚಲನಚಿತ್ರೋತ್ಸವವೂ ಆರಂಭವಾಯಿತು.
ಉತ್ಸವಕ್ಕೆ ಹೊಸ ಸೇರ್ಪಡೆಯಾದ ಕೈಗಾರಿಕಾ ದಸರಾದ ವಿಚಾರ ಸಂಕಿರಣವನ್ನು ವಿಜ್ಞಾನ ಭವನದಲ್ಲಿ ಉದ್ಘಾಟಿಸಿದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಯುವ ಉದ್ಯಮಿಗಳಲ್ಲಿ ಉತ್ತೇಜನ ತುಂಬಿದರು. ಮತ್ತೊಂದು ಸೇರ್ಪಡೆಯಾದ ಯೋಗ ದಸರಾದ ಪ್ರಯುಕ್ತ ಓವಲ್ ಮೈದಾನದಲ್ಲಿ ನಡೆದ ಯೋಗ ನೃತ್ಯರೂಪಕಕ್ಕೆ ನೂರಾರು ಮಂದಿ ಸಾಕ್ಷಿಯಾದರು.
ಉತ್ಸವದ ಅಂಗವಾಗಿ ಕಲಾಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಶಿಲ್ಪ ಮತ್ತು ಚಿತ್ರಕಲೆ ಶಿಬಿರದಲ್ಲಿ ಮೂಡಿದ ಕಲಾಕೃತಿಗಳ ಪ್ರದರ್ಶನವೂ ಆರಂಭವಾಗಿದೆ.
ವೈರ್ ಮತ್ತು ಬಲ್ಬ್ಗಳ ಅಳ ವಡಿಕೆ ನಡುವೆಯೇ ಸಂಜೆ ವಿದ್ಯುತ್ ದೀಪಾಲಂಕಾರಕ್ಕೆ ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್ಕುಮಾರ್ ಸಯ್ಯಾಜಿ ರಾವ್ ರಸ್ತೆಯಲ್ಲಿ ಚಾಲನೆ ನೀಡಿದರು. ನಂತರ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾ ಟನೆ ರಂಗಿನ ಲೋಕವನ್ನು ಸೃಷ್ಟಿಸಿತ್ತು.
ವೈದ್ಯಕೀಯ ವಸ್ತು ಪ್ರದರ್ಶನಕ್ಕೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ, ಯುವ ದಸರಾಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಚಾಲನೆ ದೊರಕಲಿದೆ.
3.5 ಲಕ್ಷ ಹೂವಿನಲ್ಲಿ ರಾಷ್ಟ್ರಪತಿ ಭವನ!
ಕುಪ್ಪಣ್ಣ ಉದ್ಯಾನದ ಗಾಜಿನ ಮನೆಯಲ್ಲಿ 3.5 ಲಕ್ಷ ಹೂವುಗಳನ್ನು ಬಳಸಿ ‘ರಾಷ್ಟ್ರಪತಿ ಭವನ’ ನಿರ್ಮಿಸಲಾಗಿದೆ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಗಾಜನೂರಿನ ಮನೆ ಪ್ರತಿಕೃತಿಯೂ ಇದೆ. ಮಕ್ಕಳನ್ನು ಆಕರ್ಷಿಸುವ ‘ಹನಿ ಬೀ’ ಕಾರ್ಟೂನ್ ಲೋಕವೂ ಅರಳಿದೆ.
ಅರಮನೆ ಎದುರು ಕೆಂಪುಕೋಟೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಕಿತ್ತೂರು ರಾಣಿ ಚೆನ್ನಮ್ಮ, ಬಿಪಿನ್ ರಾವತ್, ಮಿಗ್ 21 ವಿಮಾನದೊಂದಿಗೆ ವಿಂಗ್ ಕಮಾಂಡರ್ ಅಭಿನಂದನ್, ಜಂಬೂಸವಾರಿ ಮೆರವಣಿಗೆ, ಐಎನ್ಎಸ್ ವಿಕ್ರಾಂತ್ ಯುದ್ಧನೌಕೆ, ಕಾರ್ಗಿಲ್ ಯುದ್ಧದ ವಿಜಯೋತ್ಸವದ ಮಾದರಿಗಳು ಹೂಗಳಲ್ಲಿ ಅರಳಿವೆ.
ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ 8ನೇ ಖಾಸಗಿ ದರ್ಬಾರ್ ನಡೆಸಿದರು. ಆಸನಕ್ಕೆ ಸಿಂಹಮುಖ ಅಳವಡಿಸಿ, ಚಾಮುಂಡಿ ತೊಟ್ಟಿಯಲ್ಲಿ ಅವರಿಗೆ ಕಂಕಣ ಕಟ್ಟಲಾಯಿತು. ಕಳಶ, ಗಣೇಶ ಪೂಜೆಯನ್ನು ಸಲ್ಲಿಸಿ ಸಿಂಹಾಸನವನ್ನೇರಿದರು. ಸಂಸ್ಥಾನ ಗೀತೆ ‘ಕಾಯೌ ಶ್ರೀ ಗೌರಿ’ ನುಡಿಸಲಾಯಿತು. ಅ.4ರ ವರೆಗೆ ದರ್ಬಾರ್ ನಡೆಯಲಿದ್ದು, ವಿಜಯಯಾತ್ರೆ ಅ.5ರ ವಿಜಯದಶಮಿಯಂದು ನಡೆಯಲಿದೆ. ನವರಾತ್ರಿ ಮುಗಿಯುವವರೆಗೂ ನಿತ್ಯ ಮಧ್ಯಾಹ್ನ 2ರವರೆಗೆ ದರ್ಬಾರ್ ಹಾಲ್ಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ.
ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಾಡಕುಸ್ತಿ ಪಂದ್ಯಾವಳಿಯ ಮೊದಲ ದಿನ 39 ಜೊತೆ ಕುಸ್ತಿ ಪಂದ್ಯಗಳು ನಡೆದವು.ಉದ್ಘಾಟನಾ ಪಂದ್ಯದಲ್ಲಿ ಕೊಲ್ಹಾಪುರದ ಪೈಲ್ವಾನ್ ಸಿದ್ದೇಶ್ವರ ಮೌಲಿ ಜಮದಾಳೆ ಹಾಗೂ ಹರಿಯಾಣದ ವಿಕಾಸ್ ಕಾಳೆಪೈಪೋಟಿ ನಡೆಸಿ ಸಮಬಲ ಸಾಧಿಸಿದರು.
ಅ.2ರವರೆಗೆ ಪ್ರತಿ ದಿನ ಮಧ್ಯಾಹ್ನ 3.30ರಿಂದ ಪಂದ್ಯಗಳು ನಡೆಯಲಿವೆ.ಸೆ.30ರಂದು ರಾಜ್ಯಮಟ್ಟದ ಪುರುಷರು, ಮಹಿಳೆಯರ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ಮಹಿಳೆಯರ ನಾಡಕುಸ್ತಿ, 30ರಿಂದ ಅ.2ರವರೆಗೆ ಬೆಳಿಗ್ಗೆ 8ರಿಂದ ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರಿ ಹಾಗೂ ದಸರಾ ಕುಮಾರ್ ಪ್ರಶಸ್ತಿಗಳಿಗಾಗಿ ಸೆಣೆಸಾಟ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.