ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಸರಾ ದರ್ಶನ’ ಪಡೆದ ಗ್ರಾಮೀಣರು

ಸರ್ಕಾರದಿಂದ ಆಯೋಜನೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ
Last Updated 28 ಸೆಪ್ಟೆಂಬರ್ 2022, 12:53 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರಾವನ್ನು ನೋಡಿರದ ಗ್ರಾಮೀಣ ಜನತೆಗೆ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹಮ್ಮಿಕೊಂಡಿರುವ ‘ದಸರಾ ದರ್ಶನ’ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಸಿರು ಬಾವುಟ ತೋರಿಸುವ ಮೂಲಕ ಬುಧವಾರ ಚಾಲನೆ ನೀಡಿದರು.

ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ‘ಜಿಲ್ಲೆಯ 9 ತಾಲ್ಲೂಕಿನ ಮಹಿಳೆಯರು, ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಗ್ರಾಮೀಣ ಜನತೆಯನ್ನು ಕರೆ ತಂದು ದಸರಾ ದರ್ಶನ ಮಾಡಿಸುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತ‍ಪಡಿಸಿದರು.

‘ಇಂದಿನಿಂದ 3 ದಿನಗಳವರೆಗೆ ನಿಗಮದ 81 ಬಸ್‌ಗಳಲ್ಲಿ 4,455 ಜನರನ್ನು ಕರೆ ತಂದು ಅರಮನೆ, ಮೃಗಾಲಯ, ಜೆ.ಕೆ.ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ದಸರಾ ವೀಕ್ಷಿಸಲು ಮತ್ತು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ದಸರಾ ಆಕರ್ಷಣೆಯಾದ ದೀಪಾಲಂಕಾರವನ್ನು ತೋರಿಸಿ ಪುನಃ ಮರಳಿ ಅವರವರ ತಾಲ್ಲೂಕುಗಳಿಗೆ ಮರಳಿ ಬಿಡಲಾಗುತ್ತದೆ’ ಎಂದರು.

‘2008ರಿಂದ ದಸರಾ ದರ್ಶನ ಕಾರ್ಯಕ್ರಮ ನಡೆದುಕೊಂಡು ಬರಲಾಗುತ್ತಿದೆ. ಪ್ರತಿ ವಾಹನದಲ್ಲಿ ಒಬ್ಬ ಮೇಲ್ವಿಚಾರಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ತಿಳಿಸಿದರು.

‘ದಸರಾಗೆ ಸಾರಿಗೆ ಸಚಿವರು ಗೈರಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಲಾಖೆಯವರು ಸಚಿವರಿಗೆ ಆಹ್ವಾನ ನೀಡಿದ್ದರು. ಶ್ರೀರಾಮುಲು ಅವರು ಯಾವ ಕಾರ್ಯಕ್ರಮಕ್ಕೂ ಗೈರಾದ ಉದಾಹರಣೆ ಇಲ್ಲ. ಆದರೆ, ಅನಿವಾರ್ಯ ಕಾರಣಗಳಿಂದ ಬಂದಿಲ್ಲ’ ಎಂದು ಹೇಳಿದರು.

‘ದಸರಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನೆರವೇರಿಸಲು 21 ಸಮಿತಿಗಳನ್ನು ರಚಿಸಿದ್ದು ಅವುಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗಿದೆ. ಅವ್ಯವಸ್ಥೆ ಆಗದಂತೆ ಸಾರ್ವಜನಿಕರ ಸಲಹೆ ಸೂಚನೆ ಪಡೆದುಕೊಳ್ಳಲಾಗುತ್ತಿದೆ. ಅಧಿಕಾರಿಗಳ ಜೊತೆಗೆ ಅಧಿಕಾರೇತರರನ್ನು ಸೇರಿಸಿಕೊಂಡು ದಸರಾ ಯಶಸ್ವಿಗೊಳಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಮಂಗಳವಾರ ರಾತ್ರಿ ನಗರ ಪ್ರದಕ್ಷಿಣೆ ಮಾಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲನೆ ನಡೆಸಿದ್ದೇನೆ. ಸ್ವಚ್ಛತಾ ತಂಡವು ಮುಂಜಾನೆ 3ರಿಂದಲೇ ಕೆಲಸ ಮಾಡುತ್ತಿದ್ದಾರೆ. ಆಹಾರ ಮೇಳಕ್ಕೆ 25ರಿಂದ 30ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಯಾವುದೇ ಆಹಾರ ಪದಾರ್ಥ ವ್ಯರ್ಥವಾಗಿಲ್ಲ. ಅಂದಿನ ದಿನದ ಕಸವನ್ನು ಅಂದೇ ವಿಲೇವಾರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಬಿಜೆಪಿ ಮುಖಂಡರಾದ ಎಚ್‌.ವಿ.ರಾಜೀವ್, ಅಪ್ಪಣ್ಣ, ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT