ಮೈಸೂರು: ‘ಹಿಂದುಳಿದ ವರ್ಗಗಳಲ್ಲಿರುವ ಜಾತಿಗಳಿಗೂ ಒಳಮೀಸಲಾತಿ ಕಲ್ಪಿಸಬೇಕು’ ಎಂದು ಮೈಲ್ಯಾಕ್ ಅಧ್ಯಕ್ಷ ಆರ್.ರಘು ಕೌಟಿಲ್ಯ ಒತ್ತಾಯಿಸಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವರ್ಗ–1 ಮತ್ತು ಹಿಂದುಳಿದ ವರ್ಗ 2ಎನಲ್ಲಿ 197 ಜಾತಿಗಳಿದ್ದು, ಅವುಗಳಲ್ಲಿ 150 ಜಾತಿಗಳಿಗೆ ಸರ್ಕಾರಿ ಉದ್ಯೋಗ ಮರೀಚಿಕೆಯಾಗಿದೆ. 23 ಜಾತಿಗಳವರು ಶಾಸಕರಾಗುವುದು ಸಾಧ್ಯವೇ ಆಗಿಲ್ಲ’ ಎಂದು ತಿಳಿಸಿದರು.
‘ಕಾಯಕ ಸಮಾಜಗಳ ಪರವಾದ ಬೇಡಿಕೆ ಇದು. ಆಧುನಿಕ ಕೈಗಾರಿಕೆಗಳಿಂದಾಗಿ ವೃತ್ತಿ ಕಳೆದುಕೊಂಡಿರುವ ಅವರು, ಭೂಮಿಯೂ ಇಲ್ಲದೇ, ರಾಜಕೀಯ ಮತ್ತು ಶೈಕ್ಷಣಿಕ ಸವಲತ್ತುಗಳೂ ಸಿಗದೇ ಸಂಕಷ್ಟದಲ್ಲಿದ್ದಾರೆ. ಮೀಸಲಾತಿ ಪರಿಷ್ಕರಿಸುತ್ತಿರುವ ಸರ್ಕಾರದ ನಡೆ ಸ್ವಾಗತಾರ್ಹವಾಗಿದ್ದು, ನಮ್ಮ ಬೇಡಿಕೆಯನ್ನೂ ಈಡೇರಿಸಬೇಕು’ ಎಂದರು.
‘ಹಿಂದುಳಿದ ವರ್ಗ 2ಎ ಒಂದು ರೀತಿ ಅಕ್ವೇರಿಯಂನಂತಾಗಿದೆ. ಸೌಲಭ್ಯಗಳನ್ನು ಪ್ರಬಲ ಮೀನುಗಳು ಕಬಳಿಸುತ್ತಿವೆ. ಒಳ ಮೀಸಲಾತಿ ನೀಡಿ ಸಣ್ಣ ಜಾತಿಯ ಮೀನುಗಳನ್ನು ರಕ್ಷಿಸಬೇಕು ಮತ್ತು ಕೆನೆಪದರ ವ್ಯವಸ್ಥೆಯಿಂದಲೂ ಹೊರಗಿಡಬೇಕು. ಜೊತೆಗೆ 2ಎ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು’ ಎಂದು ಕೋರಿದರು.
‘ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿಜಕ್ಕೂ ಹಿಂದುಳಿದ ವರ್ಗಗಳ ನಾಯಕರಾಗಿದ್ದರೆ, ಈ ಬಗ್ಗೆ ಧ್ವನಿ ಎತ್ತಲಿ’ ಎಂದರು.