ಸಾಲಿಗ್ರಾಮ ಯಶವಂತ್
ಸಾಲಿಗ್ರಾಮ: ಕೊಡಗು ಭಾಗದಲ್ಲಿ ಮಳೆ ಚುರುಕಾಗಿದ್ದು, ಕಾವೇರಿ ನದಿ ನೀರಿನ ಹರಿವು ಹೆಚ್ಚಾಗಿದೆ. ತಾಲ್ಲೂಕಿನ ಚುಂಚನಕಟ್ಟೆ ಹೊರವಲಯದ ಧನುಷ್ಕೋಟಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಜಲಪಾತವು ಹಾಲಿನ ನೊರೆಯಂತೆ ಧುಮ್ಮಿಕ್ಕುವುದನ್ನು ನೋಡಲು ಪ್ರಕೃತಿಪ್ರಿಯರು ಆಗಮಿಸುತ್ತಿದ್ದಾರೆ. ಸುಮಾರು 15 ಮೀಟರ್ ಎತ್ತರದಿಂದ ಕಾವೇರಿ ನದಿ ಧುಮ್ಮಿಕ್ಕುತ್ತದೆ. ಈ ಸೊಬಗನ್ನು ಸವಿಯಲು ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ.
ಜಲಪಾತ ಕಣ್ತುಂಬಿಕೊಂಡ ಪ್ರವಾಸಿಗರು ಶ್ರೀರಾಮನ ದೇವಾಲಯಕ್ಕೆ ಭೇಟಿ ಕೊಟ್ಟು ತೆರಳುತ್ತಿದ್ದಾರೆ. ಇಲ್ಲಿ ಆಗಸ್ಟ್ ತಿಂಗಳಿನಲ್ಲಿ ರಾಜ್ಯ ಸರ್ಕಾರದಿಂದ ‘ಜಲಪಾತೋತ್ಸವ’ವನ್ನು ಆಚರಿಸಲಾಗುತ್ತದೆ.
‘ಕಾವೇರಿ ನದಿ ತುಂಬುತ್ತಿದ್ದಂತೆ ಕುಟುಂಬ ಸಮೇತ ನಾವು ಚುಂಚನಕಟ್ಟೆಗೆ ಬಂದು ಪ್ರಕೃತಿಯ ಸೊಬಗು ನೋಡಿ ಆನಂದಿಸುತ್ತೇವೆ. ಇಲ್ಲಿಗೆ ಬಂದರೆ ತುಂಬಾ ಸಂತೋಷವಾಗುತ್ತದೆ’ ಎಂದು ಬೆಂಗಳೂರಿನ ಸಾವಿತ್ರಮ್ಮ ಪ್ರತಿಕ್ರಿಯಿಸಿದರು.
‘ಮಳೆಗಾಲ ಬಂದರೆ ಧನುಷ್ಕೋಟಿ ಜಲಪಾತ ನೋಡಲು ಬರುತ್ತೇವೆ. ನಾವು ಚಿಕ್ಕವರಿದ್ದಾಗಿನಿಂದ ಇಲ್ಲಿಗೆ ಬರುತ್ತಿದ್ದೇವೆ. ಕಾವೇರಿ ನದಿ ದಂಡೆ ಮೇಲೆ ನಿಂತು ಪ್ರಕೃತಿ ಸೊಬಗನು ಕಣ್ತುಂಬಿಕೊಳ್ಳುವುದೇ ಚಂದ’ ಎಂದು ಪ್ರವಾಸಿಗ ಎಸ್.ಕೆ.ವೆಂಕಟೇಶ್ ಹೇಳುತ್ತಾರೆ.
ಜಲಪಾತದ ಐತಿಹ್ಯ: ಶ್ರೀರಾಮ, ಪತ್ನಿ ಸೀತೆ ಹಾಗೂ ಲಕ್ಷ್ಮಣನೊಂದಿಗೆ ವನವಾಸ ಮಾಡುವ ಸಂದರ್ಭದಲ್ಲಿ ಚುಂಚನಕಟ್ಟೆ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು. ಸೀತೆ ರಾಮನಿಗೆ ನೀರು ಬೇಕು ಎಂದು ಕೇಳಿದಾಗ ರಾಮ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ‘ಧನುಷ್ಕೋಟಿ’ ಎಂದು ಕರೆಯಲಾಗುತ್ತದೆ ಎಂಬ ಐತಿಹ್ಯವಿದೆ.
ಜಲಪಾತದ ಪಕ್ಕದಲ್ಲಿ ಸೀತಾ ಮಾತೆಯಿಂದ ನಿರ್ಮಾಣಗೊಂಡ ‘ಸೀತಾಬಚ್ಚಲು’ ಇದೆ. ಇಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಾರೆ.
ಸಾರಿಗೆ ವ್ಯವಸ್ಥೆ: ಕೆ.ಆರ್.ನಗರ, ಸಾಲಿಗ್ರಾಮ, ಭೇರ್ಯದಿಂದ ಚುಂಚನಕಟ್ಟೆಗೆ ಬರಲು ಅರ್ಧ ಗಂಟೆಗೊಂದರಂತೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯವಿದೆ. ಚುಂಚನಕಟ್ಟೆಯಲ್ಲಿ ಹೋಟೆಲ್ಗಳೂ ಇವೆ.
15 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ತಾಲ್ಲೂಕು ಕೇಂದ್ರದಿಂದ ಬಸ್ ಸೌಕರ್ಯವಿದೆ ಶ್ರೀರಾಮನ ದೇವಾಲಯ ಆಕರ್ಷಣೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.