ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬದುಕಿನ ಯಶಸ್ಸಿಗೆ ಕೌಶಲ ಅವಶ್ಯ- ಅರ್ಜುನ್‌ ರಂಗ

‘ಎಂದಿಗೂ ಹಿಂದುಳಿಯಬೇಡಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
Published 17 ಸೆಪ್ಟೆಂಬರ್ 2023, 6:13 IST
Last Updated 17 ಸೆಪ್ಟೆಂಬರ್ 2023, 6:13 IST
ಅಕ್ಷರ ಗಾತ್ರ

ಮೈಸೂರು: ‘ಸ್ಪರ್ಧಾತ್ಮಕ‌ ಯುಗದಲ್ಲಿ ಯಶಸ್ಸು ಗಳಿಸಲು ಪ್ರತಿಯೊಬ್ಬರು ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕೆಲಸ ಪಡೆಯಲು ಮಾತ್ರವಲ್ಲದೆ, ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗುತ್ತದೆ’ ಎಂದು ಸೈಕಲ್‌ ಪ್ಯೂರ್‌ ಅಗರಬತ್ತಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ ರಂಗ ಹೇಳಿದರು.

ನಗರದ ಒಡೆಯರ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನಲ್ಲಿ ಶನಿವಾರ ನಡೆದ ಧರ್ಮಪ್ರಸಾದ್ ರಚಿಸಿರುವ ‘ಎಂದಿಗೂ ಹಿಂದುಳಿಯಬೇಡಿ’ (ಡೋಂಟ್‌ ಗೆಟ್‌ ಲೆಫ್ಟ್‌ ಬಿಹೆಂಡ್) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರಿಗೂ ತಾಂತ್ರಿಕ ಜ್ಞಾನ, ಶಿಕ್ಷಣ ಇದ್ದೇ ಇರುತ್ತದೆ. ಆದರೆ, ಎಷ್ಟೋ ಜನರಿಗೆ ಸಾಫ್ಟ್ ಸ್ಕಿಲ್ಸ್, ಪ್ರಪಂಚ ಜ್ಞಾನ, ವಾಸ್ತವ ಸ್ಥಿತಿ ಬಗ್ಗೆ ತಿಳಿದಿರುವುದಿಲ್ಲ. ಇಂತಹ ಕೌಶಲಗಳನ್ನು ತಿಳಿದುಕೊಳ್ಳುವುದರಿಂದ ಮಾತ್ರ ಸ್ಪರ್ಧಾತ್ಮಕ‌ ಯುಗದಲ್ಲಿ ಗೆಲುವು ಸಾಧಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ವೇಗವಾಗಿ ಮುನ್ನುಗ್ಗುತ್ತಿರುವ ಜಗತ್ತಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸತನ ಹಾಗೂ ಹೊಸ ತಂತ್ರಜ್ಞಾನಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಅಗತ್ಯವಿದೆ’ ಎಂದರು.

ಸಿಐಐ ಉಪಾಧ್ಯಕ್ಷ ಈಶ್ವರ್ ರಾವ್ ಮಾತನಾಡಿ, ‘ಈ ಪುಸ್ತಕ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯವಾಗಿದೆ. ಸೂಕ್ತ ಉದಾಹರಣೆಗಳು, ಸರಳ ಭಾಷೆ ಹಾಗೂ ಉತ್ತಮ ಬರವಣಿಗೆಯಿಂದ ಈ ಪುಸ್ತಕ ಎಲ್ಲರಿಗೂ ಉಪಯೋಗವಾಗುತ್ತದೆ’ ಎಂದು ಹೇಳಿದರು.

ಮಹಾಜನ ಕಾಲೇಜಿನ ಸಿಇಒ ಪ್ರೊ.ಎಸ್.ಆರ್.ರಮೇಶ್‌ ಮಾತನಾಡಿ, ‘ಪ್ರತಿ ಶಾಲೆ, ಕಾಲೇಜಿನಲ್ಲಿ ಇರಲೇಬೇಕಾದ ಅತ್ಯುತ್ತಮ ಪುಸ್ತಕ ಇದು. ನಾನು ಇದನ್ನು ಸಂಪೂರ್ಣವಾಗಿ ಓದಿದ್ದೇನೆ. ಇದರಲ್ಲಿರುವ ಅಂಶಗಳನ್ನೆಲ್ಲಾ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ವೃತ್ತಿಜೀವನ ಉತ್ತಮಗೊಳ್ಳುತ್ತದೆ’ ಎಂದರು.  

ಲೇಖಕ ಧರ್ಮಪ್ರಸಾದ್‌ ಮಾತನಾಡಿ, ‘ಬದುಕಿನಲ್ಲಿನ ಪ್ರತಿಯೊಂದು ಅಂಶ ಹಾಗೂ ವಿಷಯಗಳನ್ನು ನಕಾರಾತ್ಮಕವಾಗಿ ಯೋಚಿಸದೇ, ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಇದು ಜೀವನದ ಯಶಸ್ಸಿಗೆ ಸಹಕಾರಿಯಾಗುತ್ತದೆ. ಇಂದಿನ ತಾಂತ್ರಿಕ ಯುಗದಲ್ಲಿ ಕೌಶಲ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ’ ಎಂದು ಸಲಹೆ ನೀಡಿದರು.

ಸಿಐಐ ಅಧ್ಯಕ್ಷ ಸ್ಯಾಮ್‌ ಚೆರಿಯನ್‌, ಡಾ.ಎಸ್.ಎನ್.ಪ್ರಸಾದ್‌, ಪ್ರಾಂಶುಪಾಲರಾದ ರೋಹಿಣಿ ನಾಗಪದ್ಮ, ಜಿಂಟೋ ಜೋಸ್‌, ಸಿ.ಜಯಂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT