ಮೈಸೂರು: ‘ಭಾರತ ದೇಶದಲ್ಲಿ ಹುಟ್ಟಿದ ಮೇಲೆ ಬೇರೆ, ಬೇರೆ ಧರ್ಮ ಎಂಬುದಿಲ್ಲ. ಆ ಭಗವಂತನಿಗೆ ಎಲ್ಲ ಜನರೂ, ಎಲ್ಲಾ ಧರ್ಮವೂ ಒಂದೇ’ ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣ ಹೂಂದಿದವರಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಚಿನ್ನದ ಪದಕ ಹಾಗೂ ಪ್ರಮಾಣಪತ್ರವನ್ನು ಶನಿವಾರ ವಿತರಿಸಿ ಅವರು ಆಶೀರ್ವಚನ ನೀಡಿದರು.
‘ಭಗವದ್ಗೀತೆಯು ಇಂದಿಗೂ, ಎಂದೆಂದಿಗೂ ಮನುಷ್ಯರಿಗೆ ಅತ್ಯಗತ್ಯವಾಗಿದೆ. ಮನೆಯಲ್ಲಿನ ದರಿದ್ರ ದೂರವಾಗಲು, ವಿದ್ಯಾಭ್ಯಾಸ ಮುಂದುವರಿಯಲು, ಮಾನಸಿಕ ತೊಳಲಾಟಗಳಿಂದ ಹೊರಬರಲು ಗೀತಾ ಪಠಣ ಸಹಕಾರಿಯಾಗಿದೆ’ ಎಂದು ಹೇಳಿದರು.
‘ಎಲ್ಲ ಕಾಲಕ್ಕೂ ಗೀತೆಯ ಬೋಧನೆ ಅಗತ್ಯವಿದೆ. ಆದ್ದರಿಂದ ಭಗವದ್ಗೀತೆಯನ್ನು ಎಲ್ಲರೂ ಕಲಿಯಬೇಕು. ಅದರಲ್ಲೂ ಈ ಕಲಿಯುಗಕ್ಕೆ ಗೀತೆ ಬೇಕೇ ಬೇಕು. ಮೊದಲು ನಿರ್ಮಲ ಮನಸ್ಸಿನಿಂದ ಮನನ ಮಾಡಬೇಕು. ಗೀತೆಯನ್ನು ಓದುವ ಸಂದರ್ಭದಲ್ಲಿ ಬೇರೆ ಕಡೆ ಗಮನಹರಿಸಬಾರದು’ ಎಂದು ಸಲಹೆ ನೀಡಿದರು.
‘ಮಾನವ ಜನ್ಮವೇ ಒಂದು ದೈವ ಸಂಕಲ್ಪ. ಈ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು. ನಾವು ಎಲ್ಲರಿಗೂ ಒಳಿತು ಮಾಡಬೇಕೆ ಹೊರತು ಕೇಡು ಬಯಸಬಾರದು’ ಎಂದು ತಿಳಿಸಿದರು.
‘ಸಂಕಲ್ಪ ಮಾಡಿ ಗೀತೆಯನ್ನು ಕಲಿತರೆ ಮನಸ್ಸಿನ ವಿಕಲ್ಪ ದೂರವಾಗುತ್ತದೆ’ ಎಂದರು.
ಅಮೆರಿಕದ ಛಲ ಶ್ರೀಕಾಂತಗಾರ ಮಾತನಾಡಿದರು.
ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ‘ಎಲ್ಲರೂ ಗೀತೆಯನ್ನು ಓದಬೇಕು. ಅಭಿಯಾನದ ಮಾದರಿಯಲ್ಲಿ ಗೀತಾಪಠಣ ಬೆಳೆಯಬೇಕು’ ಎಂದು ಆಶಿಸಿದರು.