ಮೈಸೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ. ಈ ಬಗ್ಗೆ ವಿಧಾನಸಭೆಯಲ್ಲಿ ವಿಸ್ತೃತ ರೂಪದಲ್ಲಿ ಚರ್ಚೆಯನ್ನು ನಡೆಸಿ, ಕಾನೂನು ರೂಪಿಸಬೇಕು. ಕೆಲವೊಂದು ರಾಜ್ಯಗಳಲ್ಲಿ ಸರ್ಕಾರ ಕೊಟ್ಟಿರುವ ಮೀಸಲಾತಿಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಈ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
‘ಮೀಸಲಾತಿಗೆ ಸಂಬಂಧಿಸಿದಂತೆ ರಾಜನಹಳ್ಳಿಯ ವಾಲ್ಮೀಕಿ ಸ್ವಾಮೀಜಿಗಳ ಹೋರಾಟ ಶ್ಲಾಘನೀಯ. ಮೀಸಲಾತಿ ಜಾರಿಯ ಹಂತದಲ್ಲಿ ಯಾವುದೇ ಸಮಸ್ಯೆಯಾಗಬಾರದು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಬೇರೆ ಸಮುದಾಯಗಳು ಮೀಸಲಾತಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಹಿಂದುಳಿದ ವರ್ಗದ ಸಮುದಾಯದ ತಂಟೆಗೆ ಹೋಗಬೇಡಿ’ ಎಂದುಶನಿವಾರ ಜಲದರ್ಶಿನಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
‘ಈ ಸಲ ನಡೆದ ನಾಡಹಬ್ಬ ದಸರಾ ಅದ್ದೂರಿಯೂ ಹೌದು, ಅಧ್ವಾನವೂ ಹೌದು. ಕೋವಿಡ್ ನಿಂದ ಎರಡು ವರ್ಷ ಗಳ ಕಾಲ ಯಾವುದೇ ಸಮಾರಂಭ ನಡೆಯದ ಕಾರಣ, ಈ ಬಾರಿ ಜನರಿಂದ ದಸರಾ ಯಶಸ್ವಿಯಾಗಿದೆಯೇ ಹೊರತು ಕಾರ್ಯಕ್ರಮಗಳಿಂದ ಅಲ್ಲ. ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲಿಲ್ಲ’ ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದರು.