ಮೈಸೂರು: ‘ಗನ್ ಹೌಸ್ ಸಮೀಪದ ಶಂಕರ ಮಠದಲ್ಲಿ ಫೆ.15ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ 4,500 ಜನರಿಗೆ ಮನೆಗಳ ಹಕ್ಕುಪತ್ರ ವಿತರಿಸಲಾಗುವುದು’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಇಲ್ಲಿನ ಜೆ.ಪಿ.ನಗರ ಸ್ಫೋರ್ಟ್ ಕ್ಲ್ಬ್ನಲ್ಲಿ ಶುಕ್ರವಾರ ನಡೆದ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮಸ್ಯೆಗೆ ಪರಿಹಾರ ಕೇಳಿಕೊಂಡು ನೀವು ಸರ್ಕಾರಿ ಕಚೇರಿಗೆ ಹೋಗುವ ಬದಲಾಗಿ, ಅಧಿಕಾರಿಗಳನ್ನೇ ನಿಮ್ಮ ಬಳಿಗೆ ಕರೆತರುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
‘ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ ಅದಾಲತ್ ಕಾರ್ಯಕ್ರಮ ರೂಪಿಸಿದ್ದು, 20 ಇಲಾಖೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.
‘ಫೆ.14ರಂದು ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ 150 ಕಂಪನಿಗಳು ಭಾಗವಹಿಸುತ್ತಿವೆ. ಕೌಶಲ ತರಬೇತಿಗೂ ಯೋಜಿಸಲಾಗಿದೆ’ ಎಂದು ತಿಳಿಸಿದರು.
ನಗರಪಾಲಿಕೆ ಸದಸ್ಯೆ ಶಾರದಮ್ಮ, ಮುಖಂಡ ಈಶ್ವರ್ ಇದ್ದರು.
ವಿದ್ಯಾರ್ಥಿಗಳೊಂದಿಗೆ ಸಂವಾದ: ಚಾಮುಂಡಿಪುರಂನ ಸೆಂಟ್ ಮೆರೀಸ್ ಇಂಗ್ಲಿಷ್ ಶಾಲೆಯಲ್ಲಿ ಶಾಸಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರೀಕ್ಷೆಗೆ ದಿನಗಣನೆ ಆರಂಭವಾಗಿದ್ದು, ಗಮನವನ್ನು ಓದಿನತ್ತ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.
‘ಮೊಬೈಲ್ ಫೋನ್ ಹವ್ಯಾಸವನ್ನು ಕೆಲ ದಿನಗಳ ಮಟ್ಟಿಗೆ ಬಿಟ್ಟು, ಬೆಳಿಗ್ಗೆ ಬೇಗ ಎದ್ದು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಮತ್ತು ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ದಕ್ಷಿಣ ವಲಯದ ಬಿಇಒ ಆರ್.ರಾಮಾರಾಧ್ಯ, ಬಿಆರ್ಸಿ ಶ್ರೀಕಂಠ ಸ್ವಾಮಿ, ದಕ್ಷಿಣ ವಲಯ ಬಿಆರ್ಪಿ ಶ್ರೀಕಂಠ ಶಾಸ್ತ್ರಿ, ಇಸಿಒ ಮನೋಹರ್, ಮುಖ್ಯಶಿಕ್ಷಕಿ ಸ್ಟೆಲ್ಲಾ ಮೇರಿ ಇದ್ದರು.