ಮೈಸೂರು: ‘ನಾಯಿಗಿರುವ ನಿಯತ್ತು ಮನುಷ್ಯರಿಗಿಲ್ಲ. ಸಿದ್ದರಾಮಯ್ಯ ಮುತ್ಸದ್ದಿಗಳು. ಅವರಿಂದ ಇಂಥ ಮಾತು ಬರಬಾರದಿತ್ತು’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನರೇಂದ್ರ ಮೋದಿ ಮುಂದೆ ನಾಯಿ ಮರಿ’ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾಯಿಯನ್ನು ನಾರಾಯಣಸ್ವಾಮಿ ಎಂತಲೂ ಕರೆಯುತ್ತಾರೆ. ಅದಕ್ಕೆ ಸಮ ಯಾರೂ ಇಲ್ಲ’ ಎಂದರು.
‘ವಿವಿಧ ಪಕ್ಷಗಳ ಮುಖಂಡರು ತಮ್ಮ ಇತಿಮಿತಿ ಅರ್ಥ ಮಾಡಿಕೊಳ್ಳದೇ ಎಲ್ಲರನ್ನೂ ಟೀಕಿಸುತ್ತಿದ್ದಾರೆ. ಅವರ ಕ್ಷೇತ್ರವನ್ನೇ ನೋಡಿಕೊಳ್ಳಲಾಗದವರು ರಾಜ್ಯ, ರಾಷ್ಟ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿಯೇ ಅವರ ಮಾತುಗಳನ್ನು ಜನರೂ ಆಲಿಸುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
‘ಅಮೂಲ್ ಹಾಗೂ ನಂದಿನಿ–ಕೆಎಂಎಫ್ ವಿಲೀನದ ಕುರಿತು ಈಗಾಗಲೇ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿಲೀನವಾಗಲು ಬಿಡುವುದಿಲ್ಲ’ ಎಂದು ಹೇಳಿದರು.
‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಜನರು ಬೆಂಬಲಿಸಲಿದ್ದಾರೆ. ಹೀಗಾಗಿಯೇ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರಂಭಿಸಿರುವ ಪಂಚರತ್ನ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದಾರೆ. ಪಕ್ಷ 45ರಿಂದ 50 ಕ್ಷೇತ್ರ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.