ಮೈಸೂರು: ‘ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವಿದೆ’ ಎಂದು ಪುತ್ರ, ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇಲ್ಲಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿ, ‘ವರುಣಾ ಕ್ಷೇತ್ರವು ಅವರ ಪಾಲಿಗೆ ಅದೃಷ್ಟದ್ದು. ಅಲ್ಲಿಂದ ಗೆದ್ದಿದ್ದಾಗಲೇ ವಿರೋಧಪಕ್ಷದ ನಾಯಕರಾಗಿದ್ದರು. ನಂತರ ಮುಖ್ಯಮಂತ್ರಿಯೂ ಆದರು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ವರುಣಾಕ್ಕೆ ಬರಲಿ ಎನ್ನುವುದು ನನ್ನ ಆಸೆಯಾಗಿದೆ’ ಎಂದರು.
‘ನನ್ನ ಆಸೆಯನ್ನು ಅಪ್ಪನ ಮುಂದೆ ಹೇಳಿದ್ದೇನೆ. ಅಪ್ಪ ಯಾವ ತೀರ್ಮಾನವನ್ನೂ ಮಾಡಿಲ್ಲ. ಅವರು ವರುಣಾದಿಂದ ಸ್ಪರ್ಧಿಸಿದರೆ ನಾನು ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ನಾನು ಅಪ್ಪನ ಪರವಾಗಿ ಕೆಲಸ ಮಾಡುತ್ತೇನೆ. ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳು ಅಪ್ಪನಿಗೆ ಸೇಫ್ ಇವೆ. ವರುಣಾ ಕ್ಷೇತ್ರಕ್ಕೆ ಬರಲಿ ಎನ್ನುವುದು ನನ್ನ ಮತ್ತು ಪಕ್ಷದ ಕಾರ್ಯಕರ್ತರ ಬಯಕೆಯಾಗಿದೆ’ ಎಂದು ಹೇಳಿದರು.