ತಲಕಾಡು: ತಲಕಾಡಿನ ಪಂಚಲಿಂಗ ಗಳಲ್ಲಿ ಒಂದಾದ, ದಕ್ಷಿಣ ಭಾರತದ ಶ್ರೀಶೈಲ ಎಂದೇ ಪ್ರಸಿದ್ಧಿ ಪಡೆದಿರುವ ಮುಡುಕುತೊರೆ ಜಾತ್ರೆ ಮಂಗಳವಾರ ಸಂಭ್ರಮದಿಂದ ಜರುಗಿತು.
ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಪುನರ್ನಿರ್ಮಾಣ ಹಾಗೂ ಜಾನುವಾರುಗಳಿಗೆ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರಥೋತ್ಸವವನ್ನು ರದ್ದುಪಡಿಸಿತ್ತು. ಆದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬಂದಿದ್ದರು.
ರಥೋತ್ಸವ, ತೆಪ್ಪೋತ್ಸವ, ಬಸವನ ಮಾಲೆ ಹಾಗೂ ದನಗಳ ಪರಿಷೆಗೆ ನಿಷೇಧ ಹೇರಿದ್ದರೂ ಲೆಕ್ಕಿಸದೆ ರೈತರು ತಮ್ಮ ಜಾನುವಾರುಗಳನ್ನು ಜಾತ್ರೆಗೆ ಕರೆತಂದಿದ್ದರು.
ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಮಲ್ಲಿಕಾರ್ಜುನ ಸ್ವಾಮಿಗೆ ಧೂಪ ಹಾಕಿ, ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು.
‘ಭಕ್ತರು ಹಣ್ಣು ಜವನದ ಹರಕೆ ತೀರಿಸಲು ಉತ್ಸವ ಮೂರ್ತಿ ಮತ್ತು ರಥಗಳನ್ನು ಸಿಂಗರಿಸಿ, ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಬಹುದಿತ್ತು. ಜಾತ್ರೆಗೆ ಹೆಚ್ಚಿನ ಭಕ್ತರು ಬಂದಿದ್ದರು. ರಥೋತ್ಸವ ನಡೆಸಿದ್ದರೆ ಭಕ್ತರಿಗೆ ಸಂತಸವಾಗುತ್ತಿತ್ತು’ ಎಂದು ಚಾಮರಾಜನಗರದ ನಿವಾಸಿ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.