ಮೈಸೂರು: ವಿವಿಧ ಆಟೋಟಗಳಿಗೆ ಅಂಕಣವಾಗುತ್ತಿದ್ದ ನಗರದ ಓವಲ್ ಮೈದಾನ ಸೋಮವಾರ ಯೋಗ ನೃತ್ಯ ರೂಪಕಗಳಿಗೆ ವೇದಿಕೆಯಾಯಿತು. ಯೋಗಾಭ್ಯಾಸದ ಮಹತ್ವವನ್ನು ಆ ಕಾರ್ಯಕ್ರಮ ಸಾರಿತು.
ಯೋಗ ದಸರಾ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವು ತಂಡದವರು ಯೋಗದ ಆಸನಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಗಮನಸೆಳೆದರು. ಇದರೊಂದಿಗೆ ನಗರದ ವಿವಿಧೆಡೆ ನಡೆಯುವ ಯೋಗ ದಸರೆಗೆ ಚಾಲನೆ ದೊರೆಯಿತು.
ಯೋಗ ಗುರು ಯೋಗಿ ದೇವರಾಜ್ ಅವರಿಗೆ ‘ಯೋಗ ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಬಳಿಕ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ‘ಯೋಗ ದಿನದಂದು ಮೈಸೂರಿಗೆ ಬಂದು ಮೋದಿ ಯೋಗ ಮಾಡಿದ್ದರಿಂದ ಮೈಸೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವಂತಾಗಿದೆ. ಗೋಕುಲಂ ಬಡಾವಣೆಯಲ್ಲಿ ಹೊರ ದೇಶದವರು ಬಂದು ಯೋಗ ಕಲಿಯುತ್ತಿದ್ದಾರೆ. ಆದರೆ, ನಾವು ಮಾಡದಿರುವುದು ವಿಷಾದನೀಯ’ ಎಂದರು.
‘ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ನಿತ್ಯವೂ ಯೋಗಾಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.
ಡಾ.ಗಣೇಶ್ ಕುಮಾರ್ ಶಂಖನಾದ ಮೊಳಗಿಸಿದರು. ಗಿರಿಜಾ ಮಲ್ಲೇಶ್ ಮತ್ತು ತಂಡದವರು ಪ್ರಾರ್ಥಿಸಿದರು.
ಉಪಸಮಿತಿಯ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷರಾದ ಯೋಗೇಶ್ಕುಮಾರ್ ಜೆ.ಸಿ., ಈಶ್ವರ್ ಸಿ., ಸದಸ್ಯ ಅರುಣ್ ಕುಮಾರ್, ಡಿಡಿಎಲ್ಆರ್ ಸೀಮಂತಿನಿ, ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಶ್ರೀಹರಿ, ಶಶಿಕುಮಾರ್, ಚಂದ್ರಶೇಖರ್ ಇದ್ದರು.