ಶಿಕ್ಷಣ ಕ್ಷೇತ್ರದಲ್ಲೂ...
ಸಾಂಸ್ಕೃತಿಕ ನಗರಿಯ ಶಿಕ್ಷಣ ಕ್ಷೇತ್ರದಲ್ಲೂ ಮಹಿಳೆಯರು ಪ್ರಮುಖ ಸ್ಥಾನ ನಿರ್ವಹಿಸುತ್ತಿದ್ದಾರೆ. ನಿರ್ವಹಣೆಗೆ ಹೆಗಲು ಕೊಡುತ್ತಿದ್ದಾರೆ. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯನ್ನು ಕನ್ನಡತಿ ಡಾ.ಪುಷ್ಪಾವತಿ ಮುನ್ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ಕೆಎಎಸ್ ಅಧಿಕಾರಿ ಎಂ.ಕೆ.ಸವಿತಾ ಕಾರ್ಯನಿರ್ವಹಿಸುತ್ತಿದ್ದು, ಮಾನಸಗಂಗೋತ್ರಿ ಕ್ಯಾಂಪಸ್ನಲ್ಲಿ ಹಲವು ರಚನಾತ್ಮಕ ಚಟುವಟಿಕೆಗಳ ಅನುಷ್ಠಾನದ ಭಾಗವಾಗಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಸ್ಥಾನವನ್ನು ಪ್ರತಿಮಾ ಡಿ.ಎಸ್. ಮುನ್ನಡೆಸುತ್ತಿದ್ದಾರೆ. ನಿರ್ಮಲಾ ಮಠಪತಿ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ಆಗಿದ್ದರೆ, ಮೈಸೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕಿ (ಪರಂಪರೆ) ಸ್ಥಾನವನ್ನು ಸಿ.ಎನ್.ಮಂಜುಳಾ ನಿರ್ವಹಿಸುತ್ತಿದ್ದಾರೆ.