ಕೆ.ಆರ್.ನಗರ: ‘ಆದಿವಾಸಿಗಳ ಅಭಿವೃದ್ಧಿ ಮತ್ತು ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.
‘ಸೂಕ್ಷ್ಮ, ಅತೀ ಸೂಕ್ಷ್ಮ ಯರವ, ಅಲೆಮಾರಿ, ಅರೆ ಅಲೆಮಾರಿ, ಬುಡಕಟ್ಟು ಸಮುದಾಯದವರಿಗೆ ₹4 ಲಕ್ಷ ಅನುದಾನ ನೀಡುವುದಾಗಿ ಕರ್ನಾಟಕ ವಾಲ್ಮೀಕಿ ನಿಗಮದಿಂದ ತಿಳಿಸಲಾಗಿತ್ತು. ಆದರೆ ಅನುದಾನ ನೀಡದೇ ಅನ್ಯಾಯ ಮಾಡಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
‘ಕೊಡಗು ಜಿಲ್ಲೆಯ ಕುಂದ ಗ್ರಾಮದಲ್ಲಿ ವಾಸವಾಗಿರುವ 116 ‘ಯರವ’ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ₹3.50 ಲಕ್ಷ ನೀಡುವಲ್ಲಿ ಲೋಪ ಎಸಗಲಾಗಿದೆ. ಅರಣ್ಯ ಅಧಿಕಾರಿಗಳು ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಎಚ್.ಡಿ.ಕೋಟೆ ಮಾಳದವಾಡಿ, ಕೆರೆವಾಡಿಯಲ್ಲಿ 65ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಮತ್ತು ಕೃಷಿಗಾಗಿ ಭೂಮಿ ಎಂದು ವಿಂಗಡಿಸಿ ಅವರನ್ನು ಬೀದಿಪಾಲು ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಪಂಚಮಸಾಲಿ ಜನಾಂಗವನ್ನು ಪ್ರವರ್ಗ 2ಎ ಗೆ ಸೇರಿಸಬಾರದು. ಪ್ರವರ್ಗ 2ಎ ರಲ್ಲಿರುವ 102ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ಕಲ್ಪಿಸಬೇಕು. ಕುರುಬ ಜನಾಂಗವನ್ನು ಎಸ್.ಟಿ.ಗೆ ಸೇರ್ಪಡೆಗೊಳಿಸಬೇಕು. ಪ್ರ–ವರ್ಗ 2ಎಗೆ ನೀಡಿದ ಮೀಸಲು ಪ್ರಮಾಣವನ್ನು ಶೇಕಡಾ 15ರಿಂದ ಶೇಕಡಾ 27ಕ್ಕೆ ಹೆಚ್ಚಿಸಬೇಕು. ಕಾಯಕ ಸಮಾಜದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಿ ₹1ಸಾವಿರ ಕೋಟಿ ಅನುದಾನ ಮೀಸಲು ಇಡಬೇಕು. ಬಜೆಟ್ನಲ್ಲಿ ಈ ಕುರಿತು ಚರ್ಚೆ ನಡೆಸಬೇಕು, ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುತ್ತದೆ’ ಎಂದು ಹೇಳಿದರು.
ಸಂಘಟನೆಯ ಪ್ರಮುಖ ಬೇಡಿಕೆ ಒಳಗೊಂಡ ಮನವಿಯನ್ನು ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಸಂಘದ ನಿಯೋಗ ತೆರಳಲಿದೆ ಎಂದು ಹೇಳಿದರು.
ಮುಖಂಡರಾದ ಮೋಹನಕುಮಾರ್, ಅರುಣಕುಮಾರ್ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.