ನಂಜನಗೂಡು(ಮೈಸೂರು ಜಿಲ್ಲೆ): ‘ನಮ್ಮ ಸರ್ಕಾರ ಬಂದರೆ, ಮಡಿವಾಳರಿಗೆ ರಾಜಕೀಯ ಶಕ್ತಿ ತುಂಬಲು ಯಾರಾದರೊಬ್ಬರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಗುವುದು. ಸಮಾಜದ ಮಕ್ಕಳಿಗೆ ಉಚಿತ ಶಿಕ್ಷಣ ಕಲ್ಪಿಸಲು ಪ್ರಯತ್ನಿಸುತ್ತೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಮಡಿವಾಳರ ಸಂಘದಿಂದ ತಾಲ್ಲೂಕಿನ ಕುಪ್ಪರಹಳ್ಳಿಯಲ್ಲಿ ಶುಕ್ರವಾರ ನಡೆದ ಮಡಿವಾಳರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನಮ್ಮ ಸರ್ಕಾರ ಬಂದರೆ, ಶಿಫಾರಸು ಮಾಡುತ್ತೇವೆ. ನಿಗಮಕ್ಕೆ ಅನುದಾನ ಒದಗಿಸುತ್ತೇವೆ’ ಎಂದರು.