ರಾಜ್ಕೋಟ್: ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಅವರ ಅಮೋಘ ಅರ್ಧಶತಕದ ಬಲದಿಂದ ಭಾರತ ಇತರೆ ತಂಡವು ಭಾನುವಾರ ಆರಂಭವಾದ ಇರಾನಿ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ದಿನ ಉತ್ತಮ ಮೊತ್ತ ಗಳಿಸಿದೆ
ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಇತರೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸಾಯಿ (72; 164ಎ, 4X7) ಮತ್ತು ಮಯಂಕ್ ಅಗರವಾಲ್ (32; 53ಎ, 4X6) ಉತ್ತಮ ಆರಂಭ ನೀಡಿದರು. ಆದರೆ ಸೌರಾಷ್ಟ್ರ ತಂಡದ ಬೌಲರ್ ಪಾರ್ಥ್ ಭುತ್ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು. ಇದರಿಂದಾಗಿ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್ಗಳಲ್ಲಿ 8 ವಿಕೆಟ್ಗಳಿಗೆ 298 ರನ್ ಗಳಿಸಿತು.
ಐಪಿಎಲ್ನಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವ ಸಾಯಿ ಸುದರ್ಶನ್ ಇಲ್ಲಿ ಅತ್ಯಂತ ತಾಳ್ಮೆಯ ಮತ್ತು ಸುಂದರವಾದ ಬ್ಯಾಟಿಂಗ್ ಮಾಡಿದರು. ಮಯಂಕ್ ಮೊತೆ ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ನಾಯಕ ಹನುಮವಿಹಾರಿಯೊಂದಿಗೆ 69 ರನ್ ಸೇರಿಸಿದರು.
ಇನ್ನೊಂದೆಡೆ ಆತಿಥೇಯ ತಂಡದ ಎಡಗೈ ಸ್ಪಿನ್ನರ್ ಪಾರ್ಥ್ ಅವರು ಹನುಮವಿಹಾರಿ, ಸಾಯಿ, ಯಶ್ ಧುಳ್ ಮತ್ತು ಶ್ರೀಕರ್ ಭರತ್ ಅವರ ವಿಕೆಟ್ಗಳನ್ನು ಕಬಳಿಸಿದರು. ಇದರಿಂದಾಗಿ ರನ್ ಗಳಿಕೆಗೆ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರು
ಭಾರತ ಇತರೆ: 90 ಓವರ್ಗಳಲ್ಲಿ 8 ವಿಕೆಟ್ಗಳಿಗೆ 298 (ಸಾಯಿ ಸುದರ್ಶನ್ 72, ಮಯಂಕ್ ಅಗರವಾಲ್ 32, ಹನುಮವಿಹಾರಿ 33, ಶ್ರೀಕರ್ ಭರತ್ 36, ಶಮ್ಸ್ ಮಲಾನಿ 32, ಸೌರಭ್ ಕುಮಾರ್ ಬ್ಯಾಟಿಂಗ್ 30, ಪಾರ್ಥ್ ಭುತ್ 85ಕ್ಕೆ4, ಯುವರಾಜಸಿಂಹ ದೊಡಿಯಾ 74ಕ್ಕೆ2, ಧರ್ಮೇಂದ್ರಸಿಂಹ ಜಡೇಜ 89ಕ್ಕೆ2) ವಿರುದ್ಧ ಸೌರಾಷ್ಟ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.