ಮೈಸೂರು: ‘ಭಾರತ್ ಜೋಡೊ ಯಾತ್ರೆಗೆ ಪೊಲೀಸರು ಸಂಪೂರ್ಣ ಭದ್ರತೆ ಒದಗಿಸಿದ್ದಾರೆ. ಸೂಕ್ತ ಬಂದೋಬಸ್ತ್ ಮಾಡುವಂತೆ ಮುಖ್ಯಮಂತ್ರಿಯೇ ಸೂಚಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶನಿವಾರ ಮಾತನಾಡಿದ ಸಚಿವರು, ‘ಅವರ ಯಾತ್ರೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಅನವಶ್ಯವಾಗಿ ಆರೋಪ ಮಾಡುವುದು ಸರಿಯಲ್ಲ. ರಾಹುಲ್ ಅಕ್ಕಪಕ್ಕ ಯಾರಿದ್ದಾರೆ? ಅವರೆಲ್ಲಾ ಜಾಮೀನು ಮೇಲಿರುವವರು. ಕಾಂಗ್ರೆಸ್ನವರೇನು ಸತ್ಯ ಹರಿಶ್ಚಂದ್ರರಾ?’ ಎಂದು ಕೇಳಿದರು.
‘ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಆರೋಪ ಬಂದಾಕ್ಷಣ ಪೊಲೀಸ್ ಉನ್ನತ ಅಧಿಕಾರಿಗಳನ್ನೇ ನಮ್ಮ ಸರ್ಕಾರ ಬಂಧಿಸಿದೆ. ಅದೇ ಕಾಂಗ್ರೆಸ್ನವರು ಒಬ್ಬ ಕಾನ್ಸ್ಟೆಬಲ್ ಕೂಡ ಬಂಧಿಸಿರಲಿಲ್ಲ. ಶೇ 40ರಷ್ಟು ಕಮಿಷನ್ ಆರೋಪ ಮಾಡುತ್ತಾರಲ್ಲಾ ಒಂದು ದಾಖಲೆಯನ್ನೂ ಕೊಡಲಿಲ್ಲ’ ಎಂದು ಟೀಕಿಸಿದರು.
‘ಕಾಂಗ್ರೆಸ್ ಸರ್ಕಾರವಿದ್ದಾಗ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದೀರಿ ಎಂದು ಅಕ್ಕಪಕ್ಕದಲ್ಲಿರುವವರನ್ನು ರಾಹುಲ್ ಕೇಳಿಕೊಳ್ಳಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಬಾರದು’ಎಂದರು.