ಮೈಸೂರು: ‘ಕೇರಳದ ಪ್ರತಿ ಮನೆಯಲ್ಲೂ ಇಬ್ಬರು ರೋಗಿಗಳಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳ ಮನೆಮನೆ ಕಥೆಯೂ ಇದೆ ಆಗಿದೆ’ ಎಂದು ಯುವ ರೈತ ಮಹಿಳೆ ಪವಿತ್ರಾ ಹೇಳಿದರು.
ಕಿಸಾನ್ ಸಮ್ಮೇಳನದ ಭಾನುವಾರ ‘ಯುವ ಜನಾಂಗ ಮತ್ತು ಕೃಷಿ’ ಸಂವಾದದಲ್ಲಿ ಅವರು ಮಾತನಾಡಿ, ‘ನಾವು ತಿನ್ನುವ ಆಹಾರ ವಿಷ. ರಾಜ್ಯದ ಪ್ರತಿಮನೆಯಲ್ಲೂ ಇಬ್ಬರು ಮಧುಮೇಹಿಗಳು, ಕ್ಯಾನ್ಸರ್, ಕಿಡ್ನಿ ರೋಗ ಪೀಡಿತರಿದ್ದಾರೆ’ ಎಂದರು.
‘ಕ್ಯಾನ್ಸರ್ ಕಾರಕಗಳಿರುವ ಆಹಾರವನ್ನು ಬೀದಿಬದಿ, ಮಾಲ್ಗಳಲ್ಲಿ ಮೆಲ್ಲುತ್ತಿದ್ದೇವೆ. ಕ್ಯಾನ್ಸರ್ನಿಂದ ತಂದೆ ಕಳೆದುಕೊಂಡೆ. ನಮ್ಮ ಕುಟುಂಬಕ್ಕೆ ವ್ಯವಸಾಯ ಭೂಮಿಯೇನೂ ಇರಲಿಲ್ಲ. ಆರೋಗ್ಯಕ್ಕಾಗಿ ಒಂದು ಎಕರೆಯಲ್ಲಿ ಸಾವಯವ ಕೃಷಿ ಆರಂಭಿಸಿದ್ದೇನೆ’ ಎಂದು ತಿಳಿಸಿದರು.
ತುಮಕೂರಿನ ಜವನಹಳ್ಳಿಯ ಯುವ ಕೃಷಿಕ ಜನಾರ್ಧನ್ ಮಾತನಾಡಿ, ‘ಉನ್ನತ ಶಿಕ್ಷಣ ಪಡೆದು ಮರಳಿದ ಯುವಕ– ಯುವತಿಯರನ್ನು ಹುಚ್ಚರಂತೆ ಕಾಣಲಾಗುತ್ತಿದೆ. ಆರೋಗ್ಯಯುತ ಆಹಾರ ಎಲ್ಲರ ಹಕ್ಕು. ಹೀಗಾಗಿ ಕೃಷಿಗೆ ಮರಳಿದ್ದೇನೆ’ ಎಂದರು.
‘ಶಿಕ್ಷಣದಲ್ಲಿ ಕೃಷಿಯ ಮಹತ್ವವಿಲ್ಲ. ವಾಸ್ತವಿಕತೆಗೆ ದೂರ ಇರುವ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ಕೃಷಿಗೆ ಮರಳು ನಿಜವಾದ ಶಿಕ್ಷಣ ನಮಗೇ ಬೇಕು’ ಎಂದು ಶಿಕ್ಷಕಿ ಸೌಮ್ಯಾ ಹೇಳಿದರು.
ಬಿಹಾರದ ರೇಖಾ ಮಾತನಾಡಿ, ‘ದೆಹಲಿಯಲ್ಲಿದ್ದಾಗ ಸಮಸ್ಯೆಯೊಂದಕ್ಕೆ ಸಿಲುಕಿ ಸಾಯುವ ನಿರ್ಧಾರ ಮಾಡಿದ್ದೆ. ಊರಿಗೆ ಮರಳಿದ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟುಕೊಂಡೆ’ ಎಂದರು.
ಹೈದರಾಬಾದ್ನ ಟೆಕಿ ಶ್ರೀಹರ್ಷ, ‘ವ್ಯವಸಾಯದ ಬಗ್ಗೆ ಏನೇನು ಗೊತ್ತಿರಲಿಲ್ಲ. ಐದಾರು ದೇಶಗಳಲ್ಲಿ ಕೆಲಸ ಮಾಡಿದೆ. ಷೇರು ಮಾರುಕಟ್ಟೆ ಕುಸಿತದ ಬಳಿಕ ಕೃಷಿಗೆ ಮರಳಿದೆ’ ಎಂದರು.