ಕೆ.ಆರ್.ನಗರ: ತಾಲ್ಲೂಕಿನ ನಾರಾಯಣಪುರದಲ್ಲಿ ಗುರುವಾರ ಸರ್ಕಾರಿ ಜಾಗಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ ತಾರಕಕ್ಕೇರಿದ್ದರಿಂದ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಲಾಗಿದೆ.
ಈ ವಿಷಯ ತಿಳಿದೊಡನೆ ಮತ್ತೊಂದು ಕೋಮಿನ ಜನ ಅಂತಿಮ ಯಾತ್ರೆ ತಡೆದರು. ಶವ ಹೂಳಲು ಗುಂಡಿ ತೆಗೆದಿರುವ ಜಾಗವನ್ನು ಈಗಾಗಲೇ ಆಶ್ರಯ ನಿವೇಶನಕ್ಕೆ ಗುರುತಿಸಲಾಗಿದೆ. ಮಂಜೂರು ಸಹ ಆಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶವ ಹೂಳಲು ಇಲ್ಲಿ ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದು ಕುಳಿತರು.
ನಮಗೆ ಸ್ಮಶಾನವೂ ಇಲ್ಲ. ಸ್ವಂತ ಭೂಮಿಯೂ ಇಲ್ಲ. ಆದ್ದರಿಂದ ನಾವು ಸರ್ಕಾರಿ ಜಾಗದಲ್ಲೇ ಶವಸಂಸ್ಕಾರ ನಡೆಸುತ್ತೇವೆ ಎಂದು ಮೃತರ ಸಂಬಂಧಿಕರು ರಸ್ತೆಯಲ್ಲೇ ಶವವಿಟ್ಟುಕೊಂಡು ಪ್ರತಿಭಟಿಸಿದರು. ಎರಡೂ ಗುಂಪಿನ ನಡುವೆ ವಾಗ್ವಾದ ನಡೆಯಿತು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಸುದ್ದಿ ತಿಳಿದೊಡನೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ತಾಲ್ಲೂಕು ಆಡಳಿತದ ಅಧಿಕಾರಿಗಳು ಎರಡೂ ಗುಂಪಿನ ಮನವೊಲಿಕೆಗೆ ಯತ್ನಿಸಿದರೂ ತಡರಾತ್ರಿಯವರೆಗೂ ಯಾರೊಬ್ಬರೂ ಪಟ್ಟು ಸಡಿಸಲಿಲ್ಲ. ರಸ್ತೆಯಲ್ಲೇ ಶವವಿಟ್ಟು ಪ್ರತಿಭಟಿಸಿದ್ದರಿಂದ ಈ ಮಾರ್ಗದಲ್ಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.