ಶಿವಮೊಗ್ಗ:ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಬಿದರಗೋಡಿನಲ್ಲಿ 2009ರಲ್ಲಿ ನಡೆದ ದರೋಡೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿದ್ದ ನಕ್ಸಲ್ ಕನ್ಯಾಕುಮಾರಿ ಅಲಿಯಾಸ್ ಸುವರ್ಣಾಅವರನ್ನು ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
ಅಂದು ಬಿದರಗೋಡು ಗ್ರಾಮದ ಅರುಣ್ ಕುಮಾರ್ ಅವರ ಮನೆಗೆ ನುಗ್ಗಿದ್ದ ಶಂಕಿತ ನಕ್ಸಲರ ತಂಡ ಎರಡು ಬಂದೂಕು, ನಗದು, ಒಡವೆ, ಅಡಿಕೆ ತೆಗೆದುಕೊಂಡು ಹೋಗಿತ್ತು. ಹೋಗುವಾಗ ಅಂಗಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿತ್ತು ಎಂದು ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಕನ್ಯಾಕುಮಾರಿ 7ನೇ ಆರೋಪಿ. ಅವರ ಮೇಲೆ ಕರ್ನಾಟಕ ಹಾಗೂ ಕೇರಳದಲ್ಲಿ ಒಟ್ಟು 49 ಪ್ರಕರಣಗಳು ದಾಖಲಾಗಿ ದ್ದವು. ವರ್ಷದ ಹಿಂದೆ ಶಾಂತಿಗಾಗಿ ನಾಗರಿಕ ವೇದಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದಿದ್ದರು.ಗೌರಿ ಲಂಕೇಶ್, ಎ.ಕೆ. ಸುಬ್ಬಯ್ಯಅದಕ್ಕಾಗಿಶ್ರಮಿಸಿದ್ದರು. ಅಂದಿನಿಂದಲೂ ವರ್ಷದ ಮಗುವಿನ ಜತೆ ಜೈಲಿನಲ್ಲಿ ಇದ್ದಾರೆ.
ಪ್ರಕರಣದ ವಾದ ಆಲಿಸಿದ ನ್ಯಾಯಾಧೀಶರಾದ ಪ್ರಭಾವತಿ ಹಿರೇಮಠ ಅವರು ಖುಲಾಸೆಗೊಳಿಸಿ ಆದೇಶ ನೀಡಿದರು.ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಮೂರ್ತಿರಾವ್, ಆರೋಪಿ ಪರವಾಗಿ ಕೆ.ಪಿ. ಶ್ರೀಪಾಲ್ ವಾದ ಮಂಡಿಸಿದ್ದರು.