ಸಾಗರ: ತಾಲ್ಲೂಕಿನ ಹೊಸಗುಂದ ಗ್ರಾಮದ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ನ.16 ರಿಂದ 18ರವರೆಗೆ ‘ಹೊಸಗುಂದ ಉತ್ಸವ’ವನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಉತ್ಸವದ ಪ್ರಚಾರ ಸಮಿತಿಯ ಪ್ರಮುಖರಾದ ಎಸ್.ವಿ. ಹಿತಕರ್ ಜೈನ್ ತಿಳಿಸಿದ್ದಾರೆ.
ನ.16ರಂದು ಬೆಳಿಗ್ಗೆ 10.30ಕ್ಕೆ ‘ಶಿಥಿಲಾವಸ್ಥೆಯ ದೇಗುಲಗಳು ಮತ್ತೆ ಮೈದಳೆಯುವ ಬಗೆ’ ಕುರಿತು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ನಿಂದ ವಿಚಾರ ಸಂಕಿರಣ, ಈವರೆಗೆ ಸಂರಕ್ಷಿಸಲ್ಪಟ್ಟ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಅಂದು ಸಂಜೆ 6ಕ್ಕೆ ಜಾನಪದ ಸಂಭ್ರಮ 7ಕ್ಕೆ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ ನಡೆಯಲಿದೆ ಎಂದು ತಿಳಿಸಿದರು.
ನ.7ರಂದು ಬೆಳಿಗ್ಗೆ 10-30ಕ್ಕೆ ಸಾವಯವ ಕೃಷಿ ಕುರಿತು ಪ್ರಾತ್ಯಕ್ಷಿಕೆ, ಸಾವಯವ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ. ಸಂಜೆ 6ಕ್ಕೆ ಜಾನಪದ ಸಂಭ್ರಮ, 7ಕ್ಕೆ ಅನುಶ್ರೀ ಅವರ ನಿರೂಪಣೆಯೊಂದಿಗೆ ಜೀ ಕನ್ನಡ ‘ಸರಿಗಮಪ’ ಖ್ಯಾತಿಯ ಗಾಯಕರಾದ ಹನುಮಂತ, ಚೆನ್ನಪ್ಪ, ಸುಹಾನಾ ಮತ್ತು ತಂಡದವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದು ಹೇಳಿದರು.
ನ.18ರಂದು ಬೆಳಿಗ್ಗೆ 7ರಿಂದ 12ರವರೆಗೆ ಪರಿಸರ ಪ್ರವಾಸ, ಸಂಜೆ 6ಕ್ಕೆ ಜಾನಪದ ಸಂಭ್ರಮ, ಲಕ್ಷ ದೀಪೋತ್ಸವ, 7ಕ್ಕೆ ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸೊಫೋನ್ ವಾದನ, ಆನೂರು ಅನಂತಕೃಷ್ಣ ಶರ್ಮ ಅವರಿಂದ ಮೃದಂಗ ವಾದನ, ರಾತ್ರಿ 10ಕ್ಕೆ ಯಕ್ಷಗಾನ ಏರ್ಪಡಿಸಲಾಗಿದೆ ಎಂದರು.
ಶೃಂಗೇರಿ ಶಂಕರ ಮಠದ ಡಾ.ವಿ.ಆರ್. ಗೌರಿಶಂಕರ್ ಅವರ ಮಾರ್ಗದರ್ಶನ ಹಾಗೂ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ಸಿ.ಎಂ.ಎನ್.ಶಾಸ್ತ್ರಿ ಅವರ ನೇತೃತ್ವದಲ್ಲಿ ಉತ್ಸವ ನಡೆಯಲಿದೆ. ಪ್ರತಿದಿನ ಸಾಗರದಿಂದ ಹೊಸಗುಂದಕ್ಕೆ ಹಾಗೂ ಹೊಸಗುಂದದಿಂದ ಸಾಗರಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಉಮಾಮಹೇಶ್ವರ ಸೇವಾ ಟ್ರಸ್ಟ್ನ ಗಿರೀಶ್ ಕೋವಿ, ಬಸವರಾಜ ಹೆಡತ್ರಿ, ಎಂ.ನಾಗರಾಜ್, ಗಣಪತಿ ಶೆಟ್ಟಿ, ರವಿಶಂಕರ್ ಇದ್ದರು.