ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಬಳಸಿ, ಇಂಗಿಸಿ ಗೆದ್ದವರು

ಮನೆಬಳಕೆಗೆ ಸಾಕಾಗುತ್ತದೆ ಚಾವಣಿ ಮೇಲೆ ಸಂಗ್ರಹವಾಗುವ ಮಳೆ ನೀರು
Last Updated 11 ಜೂನ್ 2018, 10:09 IST
ಅಕ್ಷರ ಗಾತ್ರ

ಹಾವೇರಿ: ಮಳೆಗಾಲದಲ್ಲಿ ಚರಂಡಿ–ಒಳಚರಂಡಿ ಬಗ್ಗೆ, ಬೇಸಿಗೆಯಲ್ಲಿ ನೀರಿನ ಹಾಹಾಕಾರ ಕುರಿತು ಬೆರಳು ಮಾಡಿ ತೋರಿಸುವವರೇ ಹೆಚ್ಚು. ಈ ನಡುವೆಯೇ ನೀರು ಇಂಗಿಸಿ, ಮಳೆ ನೀರು ಕೊಯ್ಲು ಮಾಡಿ ಗೆದ್ದವರು ನಗರದಲ್ಲಿ ಇದ್ದಾರೆ.

ಹಾವೇರಿಗೂ ನೀರಿನ ಹಾಹಾಕಾರಕ್ಕೂ ಅವಿನಾಭಾವ ಸಂಬಂಧ. ಜನವರಿ ಬಳಿಕ ನೀರಿನ ಕುರಿತೇ ಚರ್ಚೆ, ವಾಗ್ವಾದ, ಜಗಳಗಳು. ಈ ನಡುವೆ ಮಳೆ ನೀರನ್ನು ತಮ್ಮ ನಿವೇಶನದಲ್ಲಿ ಇಂಗಿಸಿದವರು ಹಾಗೂ ಸಂಪುಗಳಲ್ಲಿ ಶೇಖರಿಸುವ ಮೂಲಕ ಸಮಸ್ಯೆ ಬಗೆಹರಿಸಿಕೊಂಡ ಸಾಧಕರು ಇದ್ದಾರೆ.

ಮಂಜುನಾಥ ನಗರದ ಶಿವರಾಜ್ ಪೂಜಾರ ಹಾಗೂ ಗಿರಿರಾಜ್ ಪೂಜಾರ ತಮ್ಮ ಮನೆಯ ಮುಂದಿನ ಕಾಂಪೌಂಡ್ ನಡುವಿನ ಜಾಗವನ್ನೇ ಇಂಗು ಗುಂಡಿ ಮಾಡಿಕೊಂಡು, ಕೊಳವೆಬಾವಿ ಬತ್ತದಂತೆ ಮಾಡಿದ್ದಾರೆ. ಹೀಗಾಗಿ ಸತತ ನಾಲ್ಕು ವರ್ಷದ ಬರದ ನಡುವೆಯೂ ನೀರಿನ ಸಮಸ್ಯೆಯ ತೀವ್ರತೆ ಎದುರಿಸಿಲ್ಲ.

ಕಾಂಪೌಂಡ್ ಬದಿಯಲ್ಲಿ (ಸುಮಾರು ಆರು ಅಡಿ ಉದ್ದ) ಎಂಟು ಅಡಿ ಹೊಂಡ ಮಾಡಿ ನೀರಿಂಗಿಸುವ ಗುಂಡಿ ಮಾಡಿದ್ದಾರೆ. ಈ ಹೊಂಡಕ್ಕೆ ವಿವಿಧ ಗಾತ್ರಗಳ ಕಲ್ಲುಗಳು, ಮರಳು, ಇದ್ದಿಲು ಇತ್ಯಾದಿಗಳನ್ನು ಹಾಕಿ ಮುಚ್ಚಿದ್ದಾರೆ. 2 ಸಾವಿರ ಚದರ ಅಡಿ ವಿಸ್ತೀರ್ಣದ ಮನೆಯ ಚಾವಣಿಯ ನೀರು ಇಲ್ಲಿಗೆ ಬರುವಂತೆ ಮಾಡಿ, ಇಂಗಿಸಿದ್ದಾರೆ. ಇದರಿಂದ ಅವರ ಕೊಳವೆಬಾವಿಯ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ನೀರಿನ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ.

‘ಇದರಿಂದ ನಮ್ಮ ಕೊಳವೆಬಾವಿಯು ಏಪ್ರಿಲ್ ತನಕ ಬತ್ತಲಿಲ್ಲ. ಮೇ ಮೊದಲ ವಾರದಲ್ಲಿ ಸ್ವಲ್ಪ ಕಡಿಮೆಯಾಯಿತು. ಆಗಲೇ, ಮುಂಗಾರು ಪೂರ್ವದ ಮೊದಲ ಮಳೆಗೆ ಮರುಪೂರಣಗೊಂಡಿತು’ ಎಂದು ಅವರು ವಿವರಿಸಿದರು.

ಇಲ್ಲೇ ಸಮೀಪದ ಲಿಂಗರಾಜ ಬಸವರಾಜ ಪೂಜಾರ, ತಮ್ಮ ಮನೆಯ 900 ಚದರ ಅಡಿ ಮೇಲ್ಚಾವಣಿಯ ನೀರು ಸುಮಾರು 8 ಸಾವಿರ ಲೀಟರ್ ಸಾಮರ್ಥ್ಯದ ಸಂಪಿಗೆ ಬರುವಂತೆ ಮಾಡಿದ್ದಾರೆ.

‘ಮೊದಲ ಮಳೆಯ ನೀರನ್ನು ಹೊರಗೆ ಬಿಡುತ್ತೇವೆ. ಚಾವಣಿ ಸ್ವಚ್ಛಗೊಂಡ ಬಳಿಕ, ನೀರು ಸಂಪಿಗೆ ಬಿಡುತ್ತೇವೆ. ಅದಕ್ಕೊಂದು ಜಾಲರಿ ಇಟ್ಟಿದ್ದು, ಸ್ವಚ್ಛಗೊಂಡು ಸಂಪಿಗೆ ಹೋಗುತ್ತದೆ. ಒಂದು ಉತ್ತಮ ಮಳೆಯ ನೀರು ಹತ್ತು ದಿನಕ್ಕೆ ಸಾಕಾಗುತ್ತದೆ. ಹೆಚ್ಚಾದ ನೀರನ್ನು ಇಂಗುಗುಂಡಿಗೆ ಬಿಡುತ್ತಿದ್ದು, ಕೊಳವೆಬಾವಿ ಮರುಪೂರಣಗೊಳ್ಳುತ್ತಿದೆ. ಭಾರಿ ಮಳೆ ಬಂದರೆ, ಸಂಪು ತುಂಬಿ, ಇಂಗುಗುಂಡಿಯಲ್ಲಿ ಭರ್ತಿಯಾದ ಬಳಿಕ ಹೆಚ್ಚುವರಿ ನೀರು ಮಾತ್ರ ಹೊರಹೋಗುತ್ತದೆ. ನಮಗೆ ಮಳೆಗಾಲದಲ್ಲಿ ಮಳೆನೀರು, ಬೇಸಿಗೆಯಲ್ಲಿ ಮರುಪೂರಣಗೊಂಡ ಕೊಳವೆಬಾವಿ ನೀರು ಸಾಕಾಗುತ್ತದೆ’ ಎಂದು ಲಿಂಗರಾಜ ಬಸವರಾಜ ಪೂಜಾರ ವಿವರಿಸಿದರು.

‘ಮನೆ ನಿರ್ಮಾಣದ ಸಂದರ್ಭದಲ್ಲಿ ಕಡಿಮೆ ಖರ್ಚಿನಲ್ಲಿ ನಿರ್ಮಿಸಬಹುದು. ಮನೆ ನಿರ್ಮಾಣಕ್ಕೆ ಮರಳು, ಕಲ್ಲು, ಗ್ರಾನೈಟ್ ಮತ್ತಿತರ ವ್ಯರ್ಥ ವಸ್ತುಗಳೇ ಸಾಕಾಗುತ್ತವೆ. ಚಾವಣಿಗೆ ಹಾಕಿದ ಪೈಪ್‌ಗಳಿಂದಲೇ ಸಂಪಿಗೆ ಸಂಪರ್ಕ ನೀಡಬಹುದು. ಕಡಿಮೆ ಖರ್ಚಿನಲ್ಲಿ ಸಾಧ್ಯವಿದೆ’ ಎಂದು ವಿವರಿಸಿದರು. ಇಂತಹ ಪ್ರಯೋಗ ಮಾಡಿ ನೀರಿನ ಸಮಸ್ಯೆ ನೀಗಿಸಿಕೊಂಡವರು ಕೆಲವರಿದ್ದು, ಹಲವರು ಇತ್ತ ಚಿತ್ತ ಹರಿಸುತ್ತಿದ್ದಾರೆ.

ಕಳೆದ ವರ್ಷ ವಿವಿಧ ಸಂಘಟನೆಗಳು ಸೇರಿಕೊಂಡು ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸಿದ್ದು, ಸುಮಾರು 7 ಮಂದಿ ಇಂಗು ಗುಂಡಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಾರೆ ಜಾಗೃತಿಯಲ್ಲಿ ಸಕ್ರಿಯರಾಗಿದ್ದ ಪ್ರಭಾಕರ್ ರಾವ್ ಮಂಗಳೂರ, ಹನುಮಂತಗೌಡ ಗೊಲ್ಲರ ಹಾಗೂ ನಾಗರಾಜ ರಾಜನಾಳಕರ.

ಮಳೆ ನೀರು ಸಂಗ್ರಹದ ಸಾಧ್ಯತೆ ಹೀಗಿದೆ

ಒಂದು ಮಿ.ಮೀ. ಮಳೆ = ಒಂದು ಚ. ಮೀ.ನಲ್ಲಿ ಒಂದು ಲೀಟರ್‌ ನೀರು

ಸಾವಿರ ಮಿ.ಮೀ. ಮಳೆ= ಒಂದು ಚ. ಮೀ.ನಲ್ಲಿ ಸಾವಿರ ಲೀಟರ್ ನೀರು

ಒಂದು ಎಕರೆಯಲ್ಲಿ ಸಾವಿರ ಮಿ.ಮೀ ಮಳೆ= 40 ಸಾವಿರ ಲೀಟರ್ ನೀರು

ಒಬ್ಬ ವ್ಯಕ್ತಿಗೆ ದಿನಕ್ಕೆ ಬೇಕಾದ ನೀರು–135 ಲೀಟರ್

ಜಿಲ್ಲೆಯ ಒಟ್ಟು ವಿಸ್ತೀರ್ಣ–4.85 ಲಕ್ಷ ಹೆಕ್ಟೇರ್

ಜಿಲ್ಲೆಯ ವಾಡಿಕೆ ಮಳೆ–792.7 ಮಿ.ಮೀ.

ಮಳೆ ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಅಗತ್ಯ. ನೀರಿನ ಬಳಕೆ ಹಾಗೂ ಮರುಪೂರಣ ಮಾಡಿದರೆ ಬಹುತೇಕ ಸಮಸ್ಯೆಗಳೆ ಬಗೆಹರಿಯುತ್ತದೆ - ಚಂದ್ರಕಾಂತ ಗುಡ್ನೆವರ್, ಪರಿಸರ ಎಂಜಿನಿಯರ್, ಹಾವೇರಿ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT