ಸಲಿಂಗ ಪ್ರೇಮ, ಕಾಮದ ಬಗ್ಗೆ ಪ್ರಸ್ತಾಪವಾಗುವಾಗ ಇಬ್ಬರು ಪುರುಷರ ಚಿತ್ರಣ ಮನಸಿಗೆ ಬರುವುದು ಹೆಚ್ಚು. ಮರಾಠಿಯ ‘ಮಿತ್ರಾಚಿ ಘೋಸ್ಟ್’ (ವಿಜಯ್ ತೆಂಡೂಲ್ಕರ್) ಇಬ್ಬರು ಹೆಣ್ಣು ಮಕ್ಕಳ ಸಲಿಂಗ ಕಾಮವನ್ನು, ಅವರ ಜೀವನದಲ್ಲಿ ಸಮಾಜ ಸೃಷ್ಟಿಸುವ ತಲ್ಲಣಗಳನ್ನು ಕಟ್ಟಿಕೊಟ್ಟಿರುವ ನಾಟಕ.
ವೆಂಕಟೇಶ ಪ್ರಸಾದ್ ಅವರು ಈ ನಾಟಕವನ್ನು ‘ಒಂದು ಪ್ರೀತಿಯ ಕತೆ’ ಎಂದು ಕನ್ನಡೀಕರಿಸಿ ರಂಗಕ್ಕೆ ತಂದಿದ್ದಾರೆ. ಉಜ್ವಲ ರಾವ್ ಸಹನಿರ್ದೇಶನವಿರುವ ಈ ನಾಟಕವನ್ನು ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ಇಂದು (ಮಾ.3, ಶನಿವಾರ) ರಂಗಶಂಕರದಲ್ಲಿ ಪ್ರದರ್ಶಿಸಲಿದೆ.
ವಿಜಯ್ ತೆಂಡೂಲ್ಕರ್ 1989ರಲ್ಲಿ ರಚಿಸಿದ ನಾಟಕವಿದು. ಪ್ರೀತಿ ಎನ್ನುವುದು ದೇಶ ಕಾಲಗಳನ್ನು ಮೀರಿದ ಸಂವೇದನೆ. ದ್ವೇಷ, ಸಿಟ್ಟು, ಅಸೂಯೆಯನ್ನು ವ್ಯಕ್ತಪಡಿಸುವಷ್ಟು ಸುಲಭವಾಗಿ ಪ್ರೀತಿಯನ್ನು ವ್ಯಕ್ತಪಡಿಸಲಾಗದೆ ಇರುವುದು ಆಧುನಿಕ ಜಗತ್ತಿನ ಬಹುದೊಡ್ಡ ವ್ಯಂಗ್ಯ ಎಂಬುದು ನಿರ್ದೇಶಕರ ಅಭಿಪ್ರಾಯ.
ಸಲಿಂಗ ಪ್ರೇಮಿಗಳನ್ನು ಮುಖ್ಯ ವಾಹಿನಿಯ ಕಲಾಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡಿದ್ದೇ ಹೆಚ್ಚು. ವ್ಯವಸ್ಥೆಯ ಬಲಿಪಶುಗಳಾಗಿಯೂ ಅವರನ್ನು ಹೆಚ್ಚಾಗಿ ಬಿಂಬಿಸಲಾಗಿದೆ. ಆದರೆ ಈ ಎರಡೂ ಸಿದ್ಧಮಾದರಿಯ ಸಾಧ್ಯತೆಗಳಾಚೆ ಸಲಿಂಗ ಪ್ರೀತಿ ಅತ್ಯಂತ ಸಹಜ ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಈ ಪ್ರಯೋಗವನ್ನು ಕೈಗೆತ್ತಿಕೊಂಡಿದೆ.⇒v