ತಿಪ್ಪಸಂದ್ರ(ಮಾಗಡಿ): ಶ್ರೀರಾಮ ಭಜನೆ ಮಾಡುವುದರಿಂದ ಜನರ ಸಂಕಷ್ಟ ದೂರಾಗಲಿದೆ. ಸಾಮಾಜಿಕ ಸಾಮರಸ್ಯ ಮತ್ತು ದೇವರ ಕೃಪೆ ಲಭಿಸಲಿದೆ ಎಂದು ಭಜನಾ ಮಂಡಳಿ ಪಟೇಲ್ ರಾಜಣ್ಣ ತಿಳಿಸಿದರು.
ಬಿಸ್ಕೂರಿನ ಕಲಾವಿದ ಗರುಡರಂಗಯ್ಯ ಅವರ ಸವಿನೆನಪಿಗಾಗಿ ಮಕರ ಸಂಕ್ರಾಂತಿಗೆ ಮುನ್ನಾ ದಿನ ಸೋಮವಾರ ಆರಂಭವಾದ ಶಿವಗಂಗೆ ಭಜನಾ ಮಂಡಳಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ನೆಮ್ಮದಿ, ದೇವರ ಕರುಣೆಗಾಗಿ ಭಜನೆ ಅವಶ್ಯ. ಕುದೂರು ಅರವಟಿಗೆಯಲ್ಲಿ ಭಕ್ತರಿಂದ ಸಂಗ್ರಹಿಸಿದ ಧಾನ್ಯಗಳನ್ನು ಬಳಸಿ ದಾಸೋಹ ನಡೆಸಲಾಗುವುದು.ರಾತ್ರಿ ಶಿವಗಂಗೆ ಗವಿಗಂಗಾಧರೇಶ್ವರಸ್ವಾಮಿ ಸನ್ನಿಧಿಯಲ್ಲಿ ಭಜನೆ ನಡೆಸಲಾಗುವುದು. ಮಂಗಳವಾರ ಬಿಸ್ಕೂರಿನಲ್ಲಿ ಮಕರ ಸಂಕ್ರಾಂತಿ ಆಚರಿಸಲಾಗುವುದು ಎಂದು ತಿಳಿಸಿದರು.
ಭಜನಾ ಮಂಡಳಿ ಮೂರ್ತಿ, ಬಿ.ಎಲ್.ಅಶೋಕ್, ವೆಂಕಟೇಶ್, ನಾಗೇಶ್, ಆನಂದ್ ತಾರಕ ಸ್ವರದಲ್ಲಿ ರಾಮನಾಮಾವಳಿ ಜಪಿಸುತ್ತಾ ಶಿವಗಂಗೆಯತ್ತ ಪಾದಯಾತ್ರೆ ಹೊರಟರು. ಗ್ರಾಮದ ಮಹಿಳೆಯರು ಶ್ರೀರಾಮಚಂದ್ರನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.