ಹೂವಿನಹಡಗಲಿ: ತಾಲ್ಲೂಕಿನ ಹ್ಯಾರಡ ಗ್ರಾಮದ ಐತಿಹಾಸಿಕ ಮಲಿಯಮ್ಮ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಯಕಲ್ಪ ನೀಡುತ್ತಿದೆ.
‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ಧರ್ಮಸ್ಥಳ ಸಂಸ್ಥೆ ಈ ಕೆರೆಯ ಪುನಶ್ಚೇತನಕ್ಕೆ ₹11 ಲಕ್ಷ ನೆರವು ನೀಡಿದೆ. ಏ.7 ರಿಂದ ಕೆರೆ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದ್ದು, ಈತನಕ 8 ಎಕರೆಯಷ್ಟು ಹೂಳನ್ನು ತೆರವುಗೊಳಿಸಲಾಗಿದೆ.
ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಪಿ. ಗಂಗಾಧರ ರೈ ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಫಲವತ್ತಾದ ಕೆರೆಯ ಹೂಳನ್ನು ರೈತರು ಟ್ರ್ಯಾಕ್ಟರ್ಗಳ ಮೂಲಕ ತಮ್ಮ ಹೊಲಗಳಿಗೆ ಒಯ್ಯುತ್ತಿದ್ದಾರೆ.ಇದರಿಂದ ಸಂಸ್ಥೆಗೂ ಅನುಕೂಲ ಮತ್ತು ರೈತರಿಗೂ ಪ್ರಯೋಜನ. ಇನ್ನೂ 10 ಎಕರೆಯಷ್ಟು ಹೂಳು ತೆಗೆಯುವುದಕ್ಕಾಗಿ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಿ’ ಎಂದು ಯೋಜನಾಧಿಕಾರಿಗೆ ಸೂಚಿಸಿದರು.
ಜಿಲ್ಲಾ ನಿರ್ದೇಶಕ ವಿನಯಕುಮಾರ್ ಕಾಮಗಾರಿಯ ಮಾಹಿತಿ ನೀಡಿದರು. ‘ಕಳೆದ 20 ದಿನಗಳಿಂದ ಕಾಮಗಾರಿ ನಡೆಯುತ್ತಿದ್ದು, ಪ್ರತಿದಿನ ಮೂರು ಹಿಟಾಚಿ, ನೂರಾರು ಟ್ರ್ಯಾಕ್ಟರ್ಗಳ ಮೂಲಕ ಹೂಳು ತೆರವುಗೊಳಿಸಲಾಗುತ್ತಿದೆ’ ಎಂದು ಹೇಳಿದರು.