ಲಖನೌ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಆಡಳಿತದ ಕಾರ್ಯವೈಖರಿಯನ್ನು ಉತ್ತರ ಪ್ರದೇಶದ ಸಚಿವರೊಬ್ಬರು ಪ್ರಶಂಸೆ ಮಾಡಿರುವುದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಬಿಜೆಪಿಗೂ ಮುಜುಗರ ತಂದಿದೆ.
‘ಮಾಯಾವತಿ ಅವರು ಕಟ್ಟುನಿಟ್ಟಿನ ಆಡಳಿತ ನಡೆಸಿದ್ದರು. ಅವರ ನಿರ್ದೇಶನಗಳನ್ನು ಕಡೆಗಣಿಸುವ ಧೈರ್ಯವನ್ನು ಅಧಿಕಾರಿಗಳು ಎಂದಿಗೂ ತೋರಲಿಲ್ಲ’ ಎಂದು ಹಿರಿಯ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಖಾಸಗಿ ಟಿವಿ ವಾಹಿನಿಗೆ ಮಂಗಳವಾರ ನೀಡಿದ್ದ ಸಂದರ್ಶನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
‘ಮಾಯಾವತಿ ಅವರ ಆಡಳಿತ ಸಮಾಜವಾದಿ ಪಕ್ಷಕ್ಕಿಂತ ಉತ್ತಮವಾಗಿತ್ತು. ಅವರು ನೀಡುವ ಸಲಹೆ ಸೂಚನೆಗಳನ್ನು ಚಾಚೂತಪ್ಪದೇ ಅಧಿಕಾರಿಗಳು ಪಾಲಿಸುತ್ತಿದ್ದರು. ಆದರೆ, ಈಗ ಸಚಿವರ ಆದೇಶಗಳನ್ನು ಅಧಿಕಾರಿಗಳು ಪಾಲಿಸುವುದಿಲ್ಲ’ ಎಂದು ಹೇಳಿದ್ದರು.
ಸಚಿವರ ಹೇಳಿಕೆಯಿಂದ ತೀವ್ರ ಅಸಮಾಧಾನಗೊಂಡಿರುವ ರಾಜ್ಯದ ಬಿಜೆಪಿ ನಾಯಕರು ವಿವರಣೆ ನೀಡುವಂತೆ ಸಚಿವರಿಗೆ ಸೂಚಿಸಿದ್ದರು. ಬಳಿಕ ತಮ್ಮ ನಿಲುವು ಬದಲಿಸಿಕೊಂಡು ಸ್ಪಷ್ಟನೆ ನೀಡಿರುವ ಮೌರ್ಯ, ‘ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ’ ಎಂದು ಹೇಳಿದ್ದಾರೆ.