ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಕುವೆಂಪು ರಂಗಮಂದಿರದಲ್ಲಿ ಡಿ. 19ರ ಬೆಳಿಗ್ಗೆ 10.15ಕ್ಕೆ ಸಂಸ್ಥಾಪಕರ ದಿನಾಚರಣೆ ಹಮ್ಮಿಕೊಂಡಿದೆ.
ಮೈಸೂರು ಸಂಸ್ಥಾನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಅಭಿವನ್ ಖರೆ ಉಪಸ್ಥಿತರಿರುವರು ಎಂದು ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘದ ಸಾಧನೆಯ ಹೆಜ್ಜೆಗಳನ್ನು ಮೆಲುಕು ಹಾಕಲು, ಸಂಘಕ್ಕಾಗಿ ಶ್ರಮಿಸಿದವರ ಸ್ಮರಿಸಲು ಪ್ರತಿವರ್ಷ ಡಿಸೆಂಬರ್ನಲ್ಲಿ ಸಂಸ್ಥಾಪಕರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. 1963ರಲ್ಲಿ ಆರಂಭವಾದ ಸಂಘಕ್ಕೆ ಈಗ 55 ವರ್ಷಗಳ ಸಂಭ್ರಮ. ಜಿಲ್ಲೆಯ ಅಭಿವೃದ್ಧಿಯ ಹೆಜ್ಜೆಯಲ್ಲಿ ಸಂಘದ ಪಾತ್ರ ಸ್ಮರಣೀಯ ಎಂದರು.
ಆಕ್ಟ್ರಾಯ್, ಮನೆ ಕಂದಾಯ, ನೂತನ ರೈಲ್ವೆ ಯೋಜನೆಗಳ ಅನುಷ್ಠಾನ, ಸುಸಜ್ಜಿತ ವೈದ್ಯಕೀಯ ಕಾಲೇಜು ಹಾಗೂ ವಿಮಾನ ನಿಲ್ದಾಣ ಸ್ಥಾಪನೆಯ ಪ್ರಯತ್ನ ನೂತನ ಕೈಗಾರಿಕಾ ವಲಯಗಳ ಸ್ಥಾಪನೆ, ಅತ್ಯಾಧುನಿಕ ಘನತ್ಯಾಜ್ಯ ವಿಲೇವಾರಿ ಘಟಕದ ಕೊಡುಗೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಸಂಘದ ಹೆಜ್ಜೆ ಗುರುತುಗಳು ಎಂದು ವಿವರಿಸಿದರು.
ಶಿವಮೊಗ್ಗದ ಗೊರೂರ್ ಎಲೆಕ್ಟ್ರಿಕಲ್ಸ್, ಓಂಕಾರ್ ಪಂಪ್ಸ್, ಪಾಲ್ಆಟೊ ಎಲೆಕ್ಟ್ರಿಕಲ್ಸ್ಗೆ 2018ನೇ ಸಾಲಿನ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿ ಹಾಗೂ ಶಿವಮೊಗ್ಗದ ಹಿರಿಯ ಲೆಕ್ಕ ಪರಿಶೋಧಕ ಎಂ.ಜಿ. ರಾಮಚಂದ್ರಮೂರ್ತಿ ಅವರಿಗೆ ವಿಶೇಷ ಪುರುಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ. ರುದ್ರೇಶ್, ಎಸ್.ಎಸ್. ಉದಯ್ಕುಮಾರ್, ಬಿ.ಆರ್. ಸಂತೋಷ್, ಬಿ. ಗೋಪಿನಾಥ್, ಜಿ.ಎನ್. ಪ್ರಕಾಶ್, ಎನ್. ಗೋಪಿನಾಥ್, ಎ.ಎಂ. ಸುರೇಶ್, ಜಿ. ವಿಜಯಕುಮಾರ್, ಡಿ.ಎಸ್. ಅರುಣ್ ಉಪಸ್ಥಿತರಿದ್ದರು.