ಶಿವಮೊಗ್ಗ: ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ತಮ್ಮ ಇರುವಿಕೆ ಸಾಬೀತುಪಡಿಸಲು ಶಾಸಕ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಟೀಕಿಸಿದರು.
ಶಾಸಕರಾದ 10 ತಿಂಗಳಲ್ಲೇ ಈಶ್ವರಪ್ಪ ಅವರು ನಗರದ ಅಭಿವೃದ್ಧಿಗೆ ₨ 31 ಕೋಟಿ ಅನುದಾನ ತಂದಿದ್ದಾರೆ. ಇಂತಹ ಸತ್ಯ ಮಾರೆಮಾಚಿ ಲೋಕಸಭೆ ಚುನಾವಣೆ ಘೋಷಣೆಯಾದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಆರೋಪ ಮಾಡುತ್ತಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಎಲ್ಲ ವಾರ್ಡ್ಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ತಾರತಮ್ಯ ನಡೆದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಲತಾ ಗಣೇಶ್, ಸದಸ್ಯರಾದ ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಸುವರ್ಣ ಶಂಕರ್, ಅನಿತಾ ರವಿಶಂಕರ್, ಬಿಜೆಪಿ ಮುಖಂಡರಾದ ಮಧುಸೂದನ್, ನಾಗರಾಜ್ ಉಪಸ್ಥಿತರಿದ್ದರು.