ಶಿವಮೊಗ್ಗ: ಕಲಾವಿದರು (ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘ) ಒಕ್ಕೂಟ ಮಾರ್ಚ್ 27ರಂದು ಕುವೆಂಪು ರಂಗಮಂದಿರದಲ್ಲಿ ವಿಶ್ವರಂಗಭೂಮಿ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ನಮ್ಟೀಮ್ ಸಹಯೋಗದಲ್ಲಿ ಅಂದು ಸಂಜೆ 6.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ವಿಶ್ವ ರಂಗಭೂಮಿ ಸಂದೇಶ ವಾಚನ, ಸಾಧಕ ರಂಗಕರ್ಮಿಗಳಿಗೆ ಸನ್ಮಾನ, ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ವಿಶ್ವ ರಂಗಭೂಮಿ ಸಂದೇಶ ವಾಚನ ಮಾಡುವರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಂ.ರಾಜಕುಮಾರ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೈದ್ಯ, ಕುವೆಂಪು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪುರಸ್ಕೃತ ಕಲೀಂಉಲ್ಲಾ ಹಾಗೂ ಟಿ.ಆರ್.ಗುರುಪ್ರಸಾದ್ ಅವರನ್ನು ಸನ್ಮಾನಿಸಲಾಗುವುದು. ಒಕ್ಕೂಟದ ಅಧ್ಯಕ್ಷ ಡಾ.ಸಾಸ್ವೆಹಳ್ಳಿ ಸತೀಶ್ ಅಧ್ಯಕ್ಷತೆ ವಹಿಸುವರು ಎಂದರು.
ಕಾರ್ಯಕ್ರಮದ ನಂತರ ಬೋಳುವಾರು ಮೊಹಮದ್ ಕುಂಞ ಅವರ ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆಯಾಧರಿಸಿದ ರಂಗರೂಪಕ ಪ್ರದರ್ಶನಗೊಳ್ಳುವುದು. ಈ ನಾಟಕ ಪರಿಕಲ್ಪನೆ ಎನ್.ಆರ್.ವಿಶುಕುಮಾರ್, ರಂಗರೂಪ ಮತ್ತು ನಿದರ್ೇಶನ ಶ್ರೀಪಾದ ಭಟ್. ಈ ಕೃತಿಗೆ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಮಹಾತ್ಮಗಾಂಧಿಜೀ ಅವರ 150ನೆ ಜನ್ಮದಿನದ ಪ್ರಯುಕ್ತ ಎನ್.ಆರ್.ವಿಶುಕುಮಾರ್ ಅವರ ಕನಸಿನ ಯೋಜನೆಯಂತೆ ಈ ನಾಟಕ ಮೂಡಿಬಂದಿದೆ ಎಂದರು.
ಮೊದಲ ಹಂತದಲ್ಲಿ ಎರಡು ತಂಡಗಳು ಈ ನಾಟಕ ಕಲಿತು ತಿರುಗಾಟ ಮಾಡಿ ಪ್ರದರ್ಶನ ಮಾಡಿದ್ದರು. ಎರಡನೇ ಹಂತದಲ್ಲಿ 8 ತಂಡಗಳು ಪ್ರತಿ ಜಿಲ್ಲೆಗಳಲ್ಲೂ ಪ್ರದರ್ಶನ ನೀಡುತ್ತಿವೆ. ಎರಡನೇ ಹಂತದ ತಂಡಗಳ ಸಮಾರೋಪ ಶಿವಮೊಗ್ಗದಲ್ಲಿ ನಡೆಯಲಿದೆ. ಪ್ರವೇಶ ಉಚಿತ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ಹಿರೇಗೋಣಿಗೆರೆ, ಮಂಜು ರಂಗಾಯಣ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.