ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಆರ್.ಮದನ್ ರಾಜೀನಾನೆ ನೀಡಿದ್ದಾರೆ.
ಪಕ್ಷದಲ್ಲಿ ಈಚೆಗೆ ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದಿವೆ. ಆರ್.ಎಂ.ಮಂಜುನಾಥ ಗೌಡರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷಕ್ಕಾಗಿ ದುಡಿದವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿದ್ದಾರೆ. ಈ ಬೆಳವಣಿಗೆಗಳಿಂದ ಮನನೊಂದು ರಾಜಕೀಯ ಚಟುವಟಿಕೆಗಳಿಂದ ಸದ್ಯಕ್ಕೆ ತಟಸ್ಥವಾಗಿರುವ ನಿರ್ಧಾರ ಕೈಗೊಂಡಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ ಎಂದು ಮದನ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷನಾಗಿ 2010ರಿಂದ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದೆ. ಪ್ರಾಮಾಣಿಕವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದೆ. 3 ಸಾವಿರ ಮತ ಪಡೆದಿದ್ದ ಪಕ್ಷ 2013ರ ಹೊತ್ತಿಗೆ 22 ಸಾವಿರ ಮತ ಗಳಿಸುವಷ್ಟು ಗಟ್ಟಿಯಾಗಿತ್ತು. ಹಲವು ಹೋರಾಟ ಮಾಡಿದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ವರಿಷ್ಠರ ಆದೇಶದಂತೆ ಆರ್.ಎಂ.ಮಂಜುನಾಥ ಗೌಡರ ಪರವಾಗಿ ಕೆಲಸ ಮಾಡಿದೆ ಎಂದು ವಿವರ ನೀಡಿದರು.
ಮಂಜುನಾಥ ಗೌಡ ಅವರು ಜಿಲ್ಲಾ ಘಟಕದ ಅಧ್ಯಕ್ಷರಾದ ಮೇಲೆ ತಮ್ಮನ್ನು ಕಡೆಗಣಿಸತೊಡಗಿದರು.ತಮ್ಮನ್ನು ಬೆಂಬಲಿಗ ಪದಾಧಿಕಾರಿಗಳನ್ನು ತೆಗೆದುಹಾಕಿದರು. ಅವರದು ಒಂದು ರೀತಿ ಹಗೆ ತೀರಿಸಿಕೊಳ್ಳುವ ರಾಜಕಾರಣ ಎಂದು ಆರೋಪಿಸಿದರು.
ಈ ಬಾರಿಯ ಚುನಾವಣೆಯಲ್ಲೂ ಪಕ್ಷದ ಅಧೀಕೃತ ಕಾರ್ಯಕ್ರಮಗಳಿಂದ ದೂರ ಇಟ್ಟಿದ್ದಾರೆ. ತೇಜೊವಧೆ ಮಾಡಿ ಮೂಲೆಗುಂಪು ಮಾಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಈ ಎಲ್ಲ ಬೆಳವಣಿಗೆ ಗಮನಿಸಿದರೂ ಸುಮ್ಮನಿದ್ದಾರೆ. ಹಾಗಾಗಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡೆ.ಲೋಕಸಭಾ ಚುನಾವಣೆ ಮುಗಿಯುವವರೆಗೂ ತಟಸ್ಥವಾಗಿರಲು ನಿರ್ಧರಿಸಿದ್ದೇನೆ. ಬಿಜೆಪಿಯನ್ನೂ ಬೆಂಬಲಿಸುವುದಿಲ್ಲ. ಯುಗಾದಿಯ ನಂತರ ಮುಂದಿನ ನಿರ್ಧಾರ ಪ್ರಕಟಿಸುವೆ ಎಂದು ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ತೀರ್ಥಹಳ್ಳಿ ತಾಲ್ಲೂಕು ಮುಖಂಡರಾದ ಅಡ್ಡಗುಡ್ಡೆ ಮಹೇಶ್ ನಾಯಕ್, ಸುರೇಂದ್ರ, ಅರುಣ್, ಸಂದೀಪ್, ಮಂಜು, ಮಹೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.