ಶಿವಮೊಗ್ಗ: ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ 5.5 ಲಕ್ಷ ನೌಕರ ಸಮಸ್ಯೆ ಬಗೆಹರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ದೂರಿದರು.
ಬೆಳಗಾವಿ ಅಧಿವೇಶನದಲ್ಲಿ ನೀಡಿದ್ದ ಭರವಸೆಯಂತೆ ಸಮಿತಿ ರಚನೆ ಮಾಡಿಲ್ಲ. ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಬಾಕಿ ಇರುವ 3 ತಿಂಗಳ ಅತಿಥಿ ಉಪನ್ಯಾಸಕರ ವೇತನ ಕೂಡಲೇ ಪಾವತಿಸಬೇಕು. ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರು, ಶಿಕ್ಷಕ ವರ್ಗವನ್ನು ನಿರ್ಲಕ್ಷಿಸಿದೆ. ಹೀಗೆ ಮಾಡಿದರೆ ಅವರೆಲ್ಲ ಯುಗಾದಿ ಹಬ್ಬ ಮಾಡುವುದಾದರೂ ಹೇಗೆ? ಅತಿಥಿ ಉಪನ್ಯಾಸಕರಿಗೆ ₨ 25 ಸಾವಿರ ವೇತನ ನೀಡಬೇಕು ಎಂದು ಯುಜಿಸಿ ಸೂಚಿಸಿದ್ದರೂ ಬಹುತೇಕ ವಿಶ್ವವಿದ್ಯಾಲಯಗಳು ₨ 13 ಸಾವಿರ ನೀಡುತ್ತಿವೆ. ಈಗಲಾದರೂ ಅವರ ಸೇವೆ ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.