ಶಿವಮೊಗ್ಗ: ಗೋಪಾಳ ಬಡಾವಣೆ ಅಗಮುಡಿ ಸಮಾಜ ಸೇವಾ ಸಂಘದಲ್ಲಿ ಜೂನ್ 16ರಂದು ಅಖಿಲ ಭಾರತ ತುಳುವ ವೆಲ್ಲಾಳ (ಮೊದಲಿಯಾರ್)ಸಂಘಂ ಸಂಘಟನೆಯ 33ನೇ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಮ್ಮೇಳನ ನಡೆಯಲಿದೆ. ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಆರಂಗ ಇಳಂಗೋವನ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅಗಮುಡಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಬೆಂಗಳೂರಿನ ರಾಜರಾಜೇಶ್ವರಿ ಗ್ರೂಪ್ ಆಫ್ ಎಜುಕೇಷನ್ ಅಧ್ಯಕ್ಷ ಡಾ.ಎ.ಸಿ.ಷಣ್ಮುಗಂ, ಐಎಂಪಿಎ ಸಂಸ್ಥಾಪಕ ಡಾ.ಅರುಣಾಚಲಂ ಭಾಗವಹಿಸುವರು.
ಸಮ್ಮೇಳನದಲ್ಲಿ ಅಗಮುಡಿ, ಮೊದಲಿಯಾರ್ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥನಿಯರಿಗೆ ವಿದ್ಯಾನಿಧಿ ಪುರಸ್ಕಾರ ನೀಡಲಾಗುವುದು. ಸಮಾಜದ ಹಿರಿಯ ವ್ಯಕ್ತಿಗಳು, ಕ್ರೀಡಾ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಗುವುದು ಎಂದರು.
ಸಮ್ಮೇಳನದ ನೆನಪಿಗಾಗಿ ಸ್ವರ್ಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಅಗಮುಡಿ ಸಮಾಜದ ಇತಿಹಾಸಕಾರರು, ಶಿವಮೊಗ್ಗ ನಗರದಲ್ಲಿ ಸಾಧನೆ ಮಾಡಿದ ಸಾಧಕರ ನೆನಪು ಮಾಡಿಕೊಡಲಾಗುವುದು. ದೇಶದ ವಿವಿಧ ಭಾಗಗಳ ಅಗಮುಡಿ ಸಮಾಜ ಸಂಘಟನೆಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಎಂ. ಭೂಪಾಲ್, ಕಾರ್ಯದರ್ಶಿ ವಿ.ಸುಂದರ್, ಖಜಾಂಚಿ ಎನ್.ಷಣ್ಮುಖಂ, ಎನ್.ಕುಮಾರ್, ಡಿ. ಮಂಜುನಾಥ್, ಧನಶೇಖರ್ ಉಪಸ್ಥಿತರಿದ್ದರು.