ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಜುಲೈ 23ರಂದು ಸಂಜೆ 6ಕ್ಕೆ ಶಿಶುನಾಳ ಶರೀಫರ ಗೀತೆಗಳ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿಶುನಾಳ ಶರೀಫರ 200ನೇ ಜನ್ಮದಿನದ ಅಂಗವಾಗಿ ಸಾಮಾಜಿಕ ಸೇವಾ ಸಂಸ್ಥೆ ’ಅರಿವು’ ಈ ಕಾರ್ಯಕ್ರಮ ಆಯೋಜಿಸಿದೆ. ಹೆಸರಾಂತ ಗಾಯಕ, ಗಾಯಕಿಯರು ಆಯ್ದ ಗೀತೆಗಳನ್ನು ಹಾಡಲಿದ್ದಾರೆ ಎಂದು ಅರಿವು ಸಂಸ್ಥೆಯ ಅಧ್ಯಕ್ಷ ಎಸ್.ಎಲ್.ಲಕ್ಷ್ಮೀಕಾಂತ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಿಶುನಾಳ ಶರೀಫರ ತತ್ವ ಪದಗಳು ಇಂದಿಗೂ ಗಾಯನದ ಮೂಲಕ ಪ್ರಚಲಿತದಲ್ಲಿವೆ. ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಅಧಿಕಾರಿ ಡಾ.ಮಹೇಶ್ ಜೋಶಿ ಉದ್ಘಾಟಿಸುವರು. ಈ ಸಮಯದಲ್ಲಿ ಜೋಶಿ ಅವರನ್ನು ಸನ್ಮಾನಿಸಲಾಗುವುದು. ಸಂಸ್ಥೆಯ ಗೌರವಾಧ್ಯಕ್ಷ ಡಿ.ಎಸ್.ಅರುಣ್, ಜಿಲ್ಲಾ ಕಸಾಪ ಕಾರ್ಯದರ್ಶಿ ಎಂ.ಎನ್.ಸುಂದರ್ರಾಜ್ ಉಪಸ್ಥಿತರಿರುವರು ಎಂದರು.