ಶಿವಮೊಗ್ಗ: ಹೊಸನಗರ ತಾಲ್ಲೂಕು ಹುಂಚದ ಶ್ರೀ ಹೊಂಬುಜ ಜೈನಮಠದಲ್ಲಿ ಅ.18ರಿಂದ 20ರವರೆಗೆ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ ನಡೆಯಲಿದೆ.
ಕರ್ನಾಟಕ ಇತಿಹಾಸ ಅಕಾಡೆಮಿ, ರಾಜ್ಯ ಪುರಾತತ್ವ ಇಲಾಖೆ, ಭಾರತೀಯ ಇತಿಹಾಸ ಅನುಸಂದಾನ ಪರಿಷತ್ ಸಹಯೋಗದಲ್ಲಿ ನಡೆಯುವ ಈ ಸಮ್ಮೇಳನದ ಅಧ್ಯಕ್ಷರಾಗಿ ಇತಿಹಾಸ ಸಂಶೋಧಕ ಡಾ.ಟಿ.ವಿ.ವೆಂಕಟಾಚಾಲ ಶಾಸ್ತ್ರಿ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಟಿ.ವೆಂಕಟೇಶ್ 18ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಇತಿಹಾಸ ದರ್ಶನ ಪುಸ್ತಕ, ಹಿರಿಯ ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಸದಸ್ಯರ ಪುಸ್ತಕ ಬಿಡುಗಡೆ ಮಾಡುವರು. ಜೈನಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹಲವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇತಿಹಾಸ ತಜ್ಞ ಡಾ.ವಸುಂಧರಾ ಫಿಲಿಯೋಜ ಅವರಿಗೆ ಇತಿಹಾಸ ಸಂಸ್ಕೃಶ್ರೀ ಪ್ರಶಸ್ತಿ, ಶಾಸನತಜ್ಞ ಡಾ.ಜೆ.ಎಂ.ನಾಗಯ್ಯ ಅವರಿಗೆ ಡಾ.ಬಾ.ರಾ.ಗೋಪಾಲ್ ಪ್ರಶಸ್ತಿ, ಡಾ.ಶೀಲಾಕಾಂತ ಪತ್ತಾರ್ ಅವರಿಗೆ ಸಂಶೋಧನಾಶ್ರೀ ಪ್ರಶಸ್ತಿ, ಪ್ರಾಧ್ಯಾಪಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ನಾಯಕಶ್ರೀ ಪ್ರಶಸ್ತಿ, ಡಾ.ಡಿ.ವಿ.ಪರಮಶಿವಮೂರ್ತಿ ಅವರಿಗೆ ನೊಳಂಬಶ್ರೀ ಪ್ರಶಸ್ತಿ, ಡಾ.ಬಿ.ಜಿ.ಸಿದ್ದಲಿಂಗಮ್ಮ ಅವರಿಗೆ ಸುಮಂಗಲಾ ಪಾಟೀಲ್ ಪ್ರಶಸ್ತಿ, ಡಾ.ಕೆ.ವಸಂತ ಲಕ್ಷ್ಮಿ ಅವರಿಗೆ ಡಾ.ಶ್ರೀನಿವಾಸ ಹಾವನೂರ ಪ್ರಶಸ್ತಿ, ಎಂ.ಬಿ.ಪಾಟೀಲ್ ಅವರಿಗೆ ಸೂರ್ಯಕೀರ್ತಿ ಪ್ರಶಸ್ತಿ, ಡಾ.ಆರ್.ಮೋಹನ್ ಅವರಿಗೆ ಕೃಷ್ಣಮೆರಿಟ್ ಪ್ರಶಸ್ತಿ ನೀಡಲಾಗುವುದು ಎಂದರು.
ಮೂರು ದಿನಗಳು ಎರಡು ವೇದಿಕೆಗಳಲ್ಲಿ ಸಂಶೋಧನಾ ಗೋಷ್ಠಿಗಳು ನಡೆಯಲಿದೆ. ಅ.20ರಂದು ಸಮಾರೋಪ ನಡೆಯಲಿದೆ. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿದ್ದು.ಪಿ ಅಲಗೂರ ಸಮಾರೋಪ ಭಾಷಣ ಮಾಡುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಇತಿಹಾಸ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಪ್ರೊಜಿ.ಕೆ.ದೇವರಾಜ ಸ್ವಾಮಿ, ಕೆಳದಿ ವೆಂಕಟೇಶ್, ಎಚ್.ವಿ.ನಿತೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.